ಕಿಂಗ್ ಫಿಶರ್ ವಿಮಾನದ ಯಶಸ್ಸಿನ ನಂತರ ದೇಶದ ಎರಡನೇ ಅತಿ ದೊಡ್ಡ ವಿಮಾನ ಸಂಸ್ಥೆ ಏರ್ ಡೆಕ್ಕನ್ ಪಾಲುದಾರಿಕೆ ಪಡೆದ ಮಲ್ಯರ ಚಿತ್ತ ಇದೀಗ ಕ್ರಿಕೆಟ್ ಕ್ಷೇತ್ರದತ್ತ ತೆರಳಿದೆ.
ಮದ್ಯ, ಫ್ಯಾಶನ್, ಉದ್ಯಮ, ರೇಸ್ ಹೀಗೆ ತರಾವರಿ ಉದ್ಯಮ, ಆಸಕ್ತಿಗಳಲ್ಲಿ ಮಗ್ನರಾಗಿರುವ ಕನ್ನಡಿಗರೇ ಆಗಿರುವ ವಿಜಯ ಮಲ್ಯ ಇದೀಗ ಕರ್ನಾಟಕದ ರಾಜ್ಯ ಕ್ರಿಕೆಟ್ ಸಂಸ್ಥೆಯತ್ತ ತಮ್ಮ ಗಮನ ಹರಿಸಿದ್ದಾರೆ.
ಆದರೆ ಇದೇ ಮೊದಲ ಬಾರಿಗೆ ಮಲ್ಯ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಥವಾ ಕೆಸಿಎ ಚುನಾವಣೆಯತ್ತ ಆಸಕ್ತಿ ವಹಿಸುವ ಮುಖೇನ ಮಾಜಿ ಕ್ರಿಕೆಟಿಗ, ಈವರೆಗೆ ಸಂಸ್ಥೆಯನ್ನು ತನ್ನ ನಾಯಕತ್ವದಲ್ಲಿ ಇಟ್ಟಿದ್ದ ಬ್ರಿಜೇಶ್ ಪಟೇಲ್ ಅವರಿಗೆ ಚುರುಕು ಮುಟ್ಟಿಸಿದ್ದಾರೆ.
ಆದರೆ ಮಲ್ಯ ಈ ಬಾರಿ ನೇರವಾಗಿ ಸ್ಫರ್ದಿಸುತ್ತಿಲ್ಲ. ತಮ್ಮ ಸ್ನೇಹಿತ ಶ್ರೀಕಂಠ ದತ್ತ ಒಡೆಯರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಅಂದರೆ ಈಬಾರಿ ಕೆಸಿಎ ಅಧ್ಯಕ್ಷ ಗಾದಿಗೆ ಮೈಸೂರು ರಾಜರ ಸ್ಪರ್ಧೆ ಗ್ಯಾರೆಂಟಿ.
ಈ ಸಂಬಂಧ ಒಡೆಯರ್ ಹಾಗೂ ಮಲ್ಯ ಎರಡು ಸುತ್ತಿನ ದೂರವಾಣಿ ಸಂಪರ್ಕ ನಡೆಸಿದ್ದಾರೆ. ಈಗಾಗಲೇ ವೆಸ್ಟ್ ಇಂಡೀಸ್ ಕ್ರಿಕೆಟ್ ಅಭಿವೃದ್ಧಿ ಪಡಿಸುವಲ್ಲಿ ತೋರಿಸಿದ ಆಸಕ್ತಿಯನ್ನು ಕರ್ನಾಟಕ ಕ್ರಿಕೆಟ್ಗೆ ತೋರಿಸಬಹುದು ಎಂಬ ಮಾತು ಕೇಳಿಬರುತ್ತಿದೆ.