ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷಾದ್ ತೆರೆದ ಜೀಪ್ನಲ್ಲಿ ರೌಡಿ ಶೀಟರ್ ಬ್ರಿಗೇಡ್ ಅಜಂ ಎಂಬ ವ್ಯಕ್ತಿ ಜತೆ ಪ್ರಚಾರ ನಡೆಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಬ್ರಿಗೇಡ್ ಅಜಂ ಪಕ್ಕದಲ್ಲೇ ರಿಜ್ವಾನ್ ನಿಂತು ಚುನಾವಣೆ ಪ್ರಚಾರ ಮಾಡಿದರು. ಬ್ರಿಗೇಡ್ ಅಜಂ ಮೇಲೆ ಅನೇಕ ಪ್ರಕರಣಗಳಲ್ಲಿ ಕೇಸುಗಳು ದಾಖಲಾಗಿದೆ. ತೆರೆದ ಜೀಪ್ನಲ್ಲಿ ರೋಷನ್ ಬೇಗ್, ಸಚಿವ ಕೆ.ಜೆ. ಜಾರ್ಜ್ ಅವರು ಕೂಡ ನಿಂತಿದ್ದರು. ತಮ್ಮ ಪರ ಪ್ರಚಾರಕ್ಕೆ ರಿಜ್ವಾನ್ ರೌಡಿ ಶೀಟರ್ಗಳ ಮೊರೆ ಹೋಗುವ ಮೂಲಕ ಕಾಂಗ್ರೆಸ್ ರೌಡಿ ರಾಜಕೀಯ ಮಾಡುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಮಾಜಿ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸುತ್ತಾ ಅವನೊಬ್ಬ ನೊಟೋರಿಯಸ್ ಶಾರ್ಪ್ ಶೂಟರ್ ರೌಡಿ ಎಂದು ಹೇಳಿದ್ದಾರೆ. 2008ರಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಮಾಗಡಿ ರಸ್ತೆಯ ಠಾಣೆಯಲ್ಲಿ ಅವನನ್ನು ಬಂಧಿಸಲಾಗಿತ್ತು. ರೌಡಿ ಶೀಟರ್ ಜತೆ ರಿಜ್ವಾನ್ ಪ್ರಚಾರಕ್ಕೆ ಇಳಿದಿರುವುದು ಸಾರ್ವಜನಿಕರಿಗೆ ಭಯ ಉಂಟುಮಾಡುವಂತ ಸನ್ನಿವೇಶ ಉದ್ಭವವಾಗಿದೆ. ಮತದಾರರನ್ನು ಹೆದರಿಸಿ ಪ್ರಚಾರ ಪಡೆಯುವ ತಂತ್ರವಿರಬಹುದೇ ಎಂದು ಭಾವಿಸಲಾಗಿದೆ.
ಈ ಕುರಿತು ಗೃಹಸಚಿವ ಜಾರ್ಜ್ ಅವರನ್ನು ಪ್ರಶ್ನಿಸಿದಾಗ ಅವನು ತೆರೆದ ಜೀಪ್ನಲ್ಲಿ ಹೇಗೆ ಬಂದ ಎನ್ನುವುದು ತಮಗೆ ಗೊತ್ತಿಲ್ಲ ಎಂದು ಉತ್ತರಿಸಿದ್ದಾರೆ. ಅವನು ಯಾರು ಎನ್ನುವುದೇ ತಮಗೆ ಗೊತ್ತಿಲ್ಲ. ರಿಜ್ವಾನ್ ಅವರಿಗೂ ಅವರು ಯಾರು ಎನ್ನುವುದು ಗೊತ್ತಿಲ್ಲ ಎಂದು ಹೇಳಿದರು. ತಾವು ಪೊಲೀಸ್ ಕಮೀಷನರ್ಗೆ ಹೇಳಿ ಅಜಂ ವಿರುದ್ಧ ಕ್ರಮ ಕೈಗೊಳ್ಳಲು ಹೇಳುತ್ತೇನೆ ಎಂದು ಜಾರ್ಜ್ ಹೇಳಿದ್ದಾರೆ.