ದಾವಣಗೆರೆಯಲ್ಲಿ ಶನಿವಾರ ತನ್ನ ನೃತ್ಯಾಭ್ಯಾಸದ ಬಳಿಕ 19 ವರ್ಷ ವಯಸ್ಸಿನ ಯುವತಿ ಕವಿತಾ (ಹೆಸರು ಬದಲಾಯಿಸಲಾಗಿದೆ) ರಾತ್ರಿ 9.30ಕ್ಕೆ ಮನೆಗೆ ನಡೆದುಕೊಂಡೇ ಹೊರಟಿದ್ದಾಗ,ತನ್ನ ಹಿಂದುಗಡೆ ಬೈಕ್ ಶಬ್ದ ಕೇಳಿಸಿತು.ಅವಳ ಸ್ನೇಹಿತ ಪ್ರಥ್ವಿ ಅವಳನ್ನು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ. ಕತ್ತಲಾಗಿದ್ದರಿಂದ ಕವಿತಾ(ಹೆಸರು ಬದಲಾಯಿಸಲಾಗಿದೆ) ಅದಕ್ಕೆ ಒಪ್ಪಿ ಬೈಕ್ನಲ್ಲಿ ಕುಳಿತುಕೊಂಡಳು.ಆದರೆ ಅವನು ನೀಡಿದ ಡ್ರಾಪ್ ತನ್ನ ಜೀವನದಲ್ಲಿ ಮರೆಯಲಾಗದ ಘಟನೆಯಾಗುತ್ತದೆಂದು ಅವಳು ಎಣಿಸಲಿಲ್ಲ. ಪ್ರಥ್ವಿ ನೇರವಾಗಿ ಮನೆಗೆ ಬಿಡುವ ಬದಲಿಗೆ ಬಾಪೂಜಿ ಆಡಿಟೋರಿಯಂ ಹಿಂದಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವಳ ಮೇಲೆ ರೇಪ್ ಮಾಡಲು ಪ್ರಯತ್ನಿಸಿದ. ಆದರೆ ಕರಾಟೆಯಲ್ಲಿ ತರಬೇತಿ ಪಡೆದಿದ್ದ ಕವಿತಾ ಅವನಿಗೆ ಕೆಲವು ಕರಾಟೆ ಪಂಚ್ಗಳನ್ನು ನೀಡಿ ದಿಟ್ಟತನದಿಂದ ಹೋರಾಡಿದಳು.
ಅವಳ ಪ್ರತಿಭಟನೆಯಿಂದ ರೊಚ್ಚಿಗೆದ್ದ ಪ್ರಥ್ವಿ ಬಂಡೆಕಲ್ಲನ್ನು ಎತ್ತಿಕೊಂಡು ಅವಳ ತಲೆಯನ್ನು ಒಡೆಯಲು ಯತ್ನಿಸಿದ. ಕವಿತೆ ನೆಲಕ್ಕೆ ಬಿದ್ದಳು. ಅವಳ ತಲೆ, ಬಾಯಿಂದ ರಕ್ತದ ಒಸರತೊಡಗಿತು. ಸಹಾಯಕ್ಕಾಗಿ ಕವಿತಾ ಕೂಗಿದರೂ ಯಾರೂ ನೆರವಿಗೆ ಬರಲಿಲ್ಲ. ಕವಿತಾಳ ಪ್ರತಿರೋಧದಿಂದ ಹಿಮ್ಮೆಟ್ಟಿದ ಪ್ರಥ್ವಿ ಸ್ಥಳದಿಂದ ಓಡಿಹೋದ. ಕವಿತಾ ನೋವಿನಿಂದ ಮನೆಗೆ ತೆವಳಿಕೊಂಡು ಹೋದಳು. ಅವಳ ಮುಖ ವಿರೂಪಗೊಂಡು ರಕ್ತದಿಂದ ತೊಯ್ದುಹೋಗಿತ್ತು. ಪ್ರಥ್ವಿಯನ್ನು ಭಾನುವಾರ ಬೆಳಿಗ್ಗೆ ಬಂಧಿಸಲಾಯಿತು. ಕವಿತಾಳ ಐದು ಮುಂಭಾಗದ ಹಲ್ಲುಗಳು ಮುರಿದಿದ್ದು ತಲೆ ಮತ್ತು ಕಣ್ಣಿಗೆ ಗಾಯವಾಗಿದೆ. ಕವಿತಾಳನ್ನು ಬಾಪೂಜಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವಳ ಮುಖ ಬಾತುಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.