ಮೈಸೂರು ಸಂಸ್ಥಾನವನ್ನಾಳಿದ ಯದು ವಂಶಸ್ಥರ ಕೊನೆ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ್ದು 1953ರ ಫೆಬ್ರವರಿ 20ರಂದು. ಜಯಚಾಮರಾಜ ಒಡೆಯರ್ ಹಾಗೂ ತ್ರಿಪುರ ಸುಂದರಮ್ಮಣ್ಣಿ ಅವರ ಏಕೈಕ ಪುತ್ರ ಇವರು. 1976ರಲ್ಲಿ ಬೆಟ್ಟದ ಕೋಟೆ ಅರಸು ಮನೆತನದ ಗೋಪಾಲರಾಜೇ ಅರಸ್ ಪುತ್ರಿ ರಾಣಿ ಪ್ರಮೋದಾ ದೇವಿ, ಒಡೆಯರ್ ಅವರನ್ನು ವಿವಾಹವಾಗಿದ್ದರು.
ತಮ್ಮ ವಂಶಸ್ಥರೇ ಕಟ್ಟಿಸಿದ್ದ ಮೈಸೂರು ಮಹಾರಾಜ ಕಾಲೇಜಿನಲ್ಲಿ 1974ರಲ್ಲಿ ರಾಜಕೀಯ ಶಾಸ್ತ್ರ ಅಧ್ಯಯನ ಮಾಡಿದ್ದ ಶ್ರೀಕಂಠ ದತ್ತ ಒಡೆಯರ್, ಎಂ.ಎ.ಪದವಿ ಪೂರ್ಣಗೊಳಿಸಿ, ಶಾರದಾ ವಿಲಾಸ ಕಾಲೇಜಿನಲ್ಲಿ ಎಲ್ಎಲ್ಬಿ ಕಾನೂನು ಪದವಿ ಪಡೆದಿದ್ದರು.
ಲಂಡನ್ನಲ್ಲಿ ಶಿಕ್ಷಣ: ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಒಡೆಯರ್ ಸಂಗೀತಾಸಕ್ತರೂ ಆಗಿದ್ದರು. ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ನಲ್ಲಿ ವಿದ್ಯಾಭ್ಯಾಸ ಮಾಡಿ ಪಿಯಾನೋ ಪೋರ್ಟ್ ಪರೀಕ್ಷೆಯಲ್ಲಿ ಇಂಟರ್ಮೀಡಿಯಟ್ ಪದವಿ ಪಡೆದಿದ್ದರು.
ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡಿದ್ದ ಇವರು ಸಾಹಿತ್ಯ, ಕಲೆ, ಕ್ರೀಡೆ ಹಾಗೂ ವೈಜ್ಞಾನಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದರು. ಬಿಡುವಿನ ವೇಳೆ ವಿದೇಶ ಪ್ರಯಾಣ, ಓದು ಹಾಗೂ ಹಳೆ ವಾಚು, ಶಿಲ್ಪಕಲಾಕೃತಿಗಳ ಸಂಗ್ರಹ ಇವರ ಹವ್ಯಾಸವಾಗಿತ್ತು. ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹಿಸಿದ್ದ ಇವರು, ಮೈಸೂರು ಸೇರಿದಂತೆ ನಾನಾ ಕಡೆ ಶಿಕ್ಷಣ ಸಂಸ್ಥೆ ತೆರೆದು ಬಡ ಮಕ್ಕಳಿಗೆ ಶಿಕ್ಷಣ ದಾಸೋಹ ನಡೆಸಿದ್ದರು.
ಸಾಮಾಜಿಕ ಸೇವೆ: ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ, ಮಹಾರಾಣಿ ಲಕ್ಷ್ಮಮ್ಮ ಎಜುಕೇಷನಲ್ ಟ್ರಸ್ಟ್, ಯುವರಾಣಿ ಕೆಂಪಚೆಲುವಮ್ಮಣ್ಣಿ ಎಜುಕೇಷನಲ್ ಟ್ರಸ್ಟ್, ಗುಣಮಿತ್ರ ಮೆಟರ್ನಿಟಿ ಆ್ಯಂಡ್ ಚೈಲ್ಡ್ ವೆಲ್ಫೇರ್ ಸೆಂಟರ್, ಶ್ರೀ ಜಯಚಾಮರಾಜೇಂದ್ರ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷರಾಗಿ ಸಾಕಷ್ಟು ವರ್ಷ ಕಾಲ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಸ್ವತಃ ಮೈಸೂರು ವಿವಿಯಲ್ಲಿ ಕೆಲ ಕಾಲ ರಾಜ್ಯಶಾಸ್ತ್ರ ವಿಷಯ ಬೋಧಿಸಿದ್ದರು.
ಕ್ರಿಕೆಟ್ ರೇಸಿಂಗ್ ಸಂಸ್ಥೆ ಸದಸ್ಯರಾಗಿ, ಮೈಸೂರು ನ್ಪೋರ್ಟ್ಸ್ ಕ್ಲಬ್, ಬೆಂಗಳೂರು ಗಾಲ್ಫ್ ಕ್ಲಬ್, ಮೈಸೂರು ರೇಸ್ ಕ್ಲಬ್, ಬೆಂಗಳೂರು ಟರ್ಪ್ ಕ್ಲಬ್, ದೆಹಲಿ ರೇಸ್ ಕ್ಲಬ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹಾಗೂ ಕ್ಲಬ್ ಹೌಸ್ನಲ್ಲಿ ಸದಸ್ಯರಾಗಿದ್ದರು. ಇತ್ತೀಚೆಗೆ ಕೆಎಸ್ಸಿಎ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಡೆಯರ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಮದ್ರಾಸ್ ವಿ.ವಿ. ಪರ ಕ್ರಿಕೆಟ್ ಆಡಿದ್ದರು
ಒಡೆಯರ್ ಒಬ್ಬ ಕ್ರಿಕೆಟ್ ಆಟಗಾರ. ಅಪ್ಪಟ ಕ್ರೀಡಾ ಪ್ರೇಮಿ. ಆಗಿನ ಕಾಲಕ್ಕೆ ಮದ್ರಾಸ್ ಯೂನಿವರ್ಸಿಟಿ ಕ್ರಿಕೆಟ್ ಟೀಂಗೆ ಆಯ್ಕೆ ಆಗಿದ್ದರೆಂದು ಅವರೊಂದಿಗೆ ಟೀಂಗೆ ಆಯ್ಕೆಯಾಗಿದ್ದ ಪತ್ರಕರ್ತ ಕೆ.ಜೆ.ಕುಮಾರ್ ಸ್ಮರಿಸಿದ್ದಾರೆ. ಮಹಾರಾಜ ಕಾಲೇಜಿನಲ್ಲಿ ತಾವು ಅವರು ಜತೆಯಾಗಿಯಾಗಿ ಓದುತ್ತಿದ್ದೆವು. ಅಂದಿನ ಕಾಲಕ್ಕೆ ಅವರಿಗೆ ಅರಮನೆಯಿಂದ ಪ್ರತ್ಯೇಕ ಕುರ್ಚಿ, ಊಟ ಬರುತ್ತಿತ್ತು. ಕ್ಯಾಂಟೀನ್ಗೂ ಬರುತ್ತಿದ್ದರು. ಮನೆಯಿಂದ ಪ್ರತ್ಯೇಕ ಕುರ್ಚಿ ಬರುವುದನ್ನು ನಾನು ಪ್ರಶ್ನಿಸಿ, ಏನು ಒಡೆಯರ್ ಅವರೇ ಇದು ಬೇಕೆ ಎಂದು ಕೇಳಿದ್ದೆ, ಆಗ ತಮ್ಮೊಂದಿಗೆ ಖ್ಯಾತ ಕತೆಗಾರ ದಿ.ಆಲನಹಳ್ಳಿ ಕೃಷ್ಣ ಕೂಡ ಇದ್ದರು. ಒಡೆಯರ್ ಏನನ್ನೂ ಹೇಳಲಿಲ್ಲ. ಆದರೆ, ಮಾರನೇ ದಿನದಿಂದ ಕುರ್ಚಿ ಬರುವುದು ನಿಂತಿತ್ತು.
ಜಯಚಾಮರಾಜರ ಪುತ್ರ
ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ ಪುತ್ರ. ಇವರಿಗೆ ಐವರು ಅಕ್ಕ-ತಂಗಿಯರು.
ತಮ್ಮ 18ನೆಯ ವಯಸ್ಸಿಗೆ 1938 ರಲ್ಲಿ ಸತ್ಯಪ್ರೇಮ ಕುಮಾರಿ ದೇವಿ ಯವರನ್ನು ಜಯಚಾಮರಾಜ ಒಡೆಯರ್ ವಿವಾಹವಾಗಿದ್ದರು. ಅನಂತರ 21ನೇ ವಯಸ್ಸಿಗೆ ತ್ರಿಪುರ ಸುಂದರಮ್ಮಣ್ಣಿಯವ ರೊಡನೆ ಎರಡನೇ ವಿವಾಹವಾದರು. ದ್ವಿಪತ್ನಿಯರನ್ನು ಹೊಂದಿದ್ದ ಅವರು ಐವರು ಪುತ್ರಿಯರು ಹಾಗೂ ಒಬ್ಬ ಪುತ್ರ ಸೇರಿದಂತೆ ಆರು ಮಕ್ಕಳನ್ನು ಪಡೆದಿದ್ದರು. ಅವರು- ಗಾಯತ್ರಿದೇವಿ, ಮೀನಾಕ್ಷಿದೇವಿ, ಕಾಮಾಕ್ಷಿದೇವಿ, ವಿಶಾಲಾಕ್ಷಿದೇವಿ, ಇಂದ್ರಾಕ್ಷಿದೇವಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರು.