ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಅವರ ಹಗಲು ಕನಸು ಯಾವತ್ತು ನನಸಾಗದು ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಎಂ.ಮಲ್ಲಿಕಾರ್ಜುನ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ರವರ ಭಾಷಣಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಪ್ರತಿ ಹೇಳಿಕೆ ನೀಡುವ ಮೂಲಕ ದೊಡ್ಡವರನ್ನು ಹೋಲಿಸಿಕೊಂಡ್ರೆ ಪ್ರಧಾನಿಯಾಗ್ಬಹುದು ಎಂದು ಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಗುಜರಾತ್ ರಾಜ್ಯ ಅಭಿವೃದ್ಧಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಸುಳ್ಳನ್ನು ಮೋದಿ ಹೇಳುತ್ತಿದ್ದಾರೆ. ಯೋಜನಾ ಆಯೋಗದ ಪ್ರಕಾರ ಗುಜರಾತ್ ರಾಜ್ಯ ಅಭಿವೃದ್ಧಿಯಲ್ಲಿ 10-12ನೇ ಸ್ಥಾನದಲ್ಲಿದೆ. ಕೇರಳ, ಹರಿಯಾಣಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಮುಂಚೂಣಿಯಲ್ಲಿವೆ ಎಂದು ತಿರುಗೇಟು ನೀಡಿದರು.
ಸ್ವಾತಂತ್ರ್ಯ ದಿನದಂದೇ ಪ್ರಧಾನಿಗಳ ಭಾಷಣಕ್ಕೆ ಪ್ರತಿಯಾಗಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಟೀಕೆ ಮಾಡಿದ ಉದಾಹರಣೆಗಳು ದೇಶದಲ್ಲಿಲ್ಲ. ಬಿಜೆಪಿ ಹಿರಿಯ ನಾಯಕ ಆಡ್ವಾಣಿಯವರೆ ಮೋದಿ ಭಾಷಣಕ್ಕೆ ಅಸಮಾಧಾನ ವ್ಯಕ್ತಪಡಿಸಿ ಪ್ರಬುದ್ಧತೆ ಮೆರೆದಿದ್ದಾರೆ ಎಂದು ಸಚಿವ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.