Select Your Language

Notifications

webdunia
webdunia
webdunia
webdunia

ಮೈಸೂರು ಸಿಂಹಾಸನದ ಹಿನ್ನೆಲೆ ಗೊತ್ತಾ?: ಖಾಸಗಿ ದರ್ಬಾರ್ ಆರಂಭ

ಮೈಸೂರು ಸಿಂಹಾಸನದ ಹಿನ್ನೆಲೆ ಗೊತ್ತಾ?: ಖಾಸಗಿ ದರ್ಬಾರ್ ಆರಂಭ
ಮೈಸೂರು , ಬುಧವಾರ, 28 ಸೆಪ್ಟಂಬರ್ 2011 (13:45 IST)
WD
ಸಾಂಸ್ಕೃತಿಕ ನಗರಿ, ನವವಧುವಿನಂತೆ ಸಿಂಗಾರಗೊಂಡಿರುವ ಅರಮನೆ ನಗರಿ ಮೈಸೂರಿನಲ್ಲಿ 401ನೇ ದಸರಾ ಮಹೋತ್ಸವಕ್ಕೆ ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಬುಧವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ನಂತರ 9 ದಿನಗಳ ಕಾಲ ನಡೆಯಲಿರುವ ಖಾಸಗಿ ದರ್ಬಾರ್‌ಗೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಚಿನ್ನದ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ನಂತರ ಸಿಂಹಾಸನ ಏರುವ ಮೂಲಕ ದರ್ಬಾರ್‌ಗೆ ಚಾಲನೆ ನೀಡಿದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಒಡೆಯರ್ ಖಾಸಗಿ ರಾಜ ದರ್ಬಾರ್ ಆರಂಭ:
ಅಂಬಾವಿಲಾಸ ಅರಮನೆಯಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಅವರು ಆರಂಭಿಕವಾಗಿ ನವಗ್ರಹ ಪೂಜೆ ನೆರವೇರಿಸಿದರು. ನಂತರ ಅರಮನೆ ಪುರೋಹಿತರು ಹಾಗೂ ಒಡೆಯರ್ ಚಿನ್ನದ ಸಿಂಹಾಸನಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಿಂಹಾಸನ ಏರಿದರು. ಈ ಸಂದರ್ಭದಲ್ಲಿ ಪತ್ನಿ ಪ್ರಮೋದಾದೇವಿ ಒಡೆಯರ್ ಅವರ ಪಾದಪೂಜೆ ನೆರವೇರಿಸಿದರು.

ರಾಜ ಪೋಷಾಕಿನಲ್ಲಿ ಚಿನ್ನದ ಸಿಂಹಾನದ ಏರಿದ ಒಡೆಯರ್ ಅವರಿಗೆ ಅರಮನೆ ಸರದಾರರು ಬಹುಪರಾಕ್ ಹೇಳಿದರು. ಸುಮಾರು 250 ಕೆಜಿ ತೂಕದ ಚಿನ್ನದ ಸಿಂಹಾಸನದಲ್ಲಿ ಬುಧವಾರ ಬೆಳಿಗ್ಗೆ ಮತ್ತು ಸಾಯಂಕಾಲ ಒಡೆಯರ್ ಖಾಸಗಿ ದರ್ಬಾರ್ ನಡೆಯಲಿದೆ. ಗುರುವಾರದಿಂದ ಸಾಯಂಕಾಲ ಮಾತ್ರ ಖಾಸಗಿ ದರ್ಬಾರ್ ನಡೆಯಲಿದೆ ಎಂದು ಹಿರಿಯ ಇತಿಹಾಸ ತಜ್ಞ ನಂಜರಾಜ್ ಅರಸ್ ತಿಳಿಸಿದರು.

webdunia
WD
ಸ್ವರ್ಣ ಸಿಂಹಾಸನದ ಹಿನ್ನೆಲೆ:
ಈ ಸ್ವರ್ಣ ಸಿಂಹಾಸನದಲ್ಲಿ ಮೂರು ಭಾಗಗಳಿವೆ. ಒಂದು ಮುಖ್ಯ ಆಸನ, ಇನ್ನೊಂದು ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಮೂಲತಃ ಅಂಜೂರದ ಮರದಿಂದ ತಯಾರಿಸಲಾಗಿರುವ ಈ ರಾಜಗದ್ದುಗೆಗೆ ಆನೆದಂತದ ಪಟ್ಟಿಗಳನ್ನು ಅಳವಡಿಸಲಾಗಿದೆ. ಇವೆಲ್ಲ ಭಾಗಗಳನ್ನು ಬೇರ್ಪಡಿಸಿ ಮತ್ತೆ ಜೋಡಿಸುವ ತಾಂತ್ರಿಕತೆ ಹೊಂದಿದೆ.

ಸಿಂಹಾಸನದ ಛತ್ರಿಯ ಮೇಲೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಸಂಬೋಧಿಸಿ ಸಂಸ್ಕೃತದ 24 ಶ್ಲೋಕಗಳನ್ನು ಕೆತ್ತಲಾಗಿದೆ. ಈ ಶ್ಲೋಕಗಳ ಪ್ರಕಾರ ಸಿಂಹಾಸನವು ಮಹಾಭಾರತದ ಪಾಂಡವರಿಗೆ ಸೇರಿದ್ದು, ಹಸ್ತಾನಾಪುರದಲ್ಲಿ ಇದ್ದ ಸಿಂಹಾಸವನ್ನು ಕಂಪಿಲರಾಯನು ಹಸ್ತಾನಾಪುರದಿಂದ ಆಂಧ್ರಪ್ರದೇಶದ ಪೆನುಗೊಂಡಕ್ಕೆ ತಂದನಂತೆ. ಇಲ್ಲಿ ಅದನ್ನು ಭೂಗತ ಮಾಳಿಗೆಯಲ್ಲಿ ಇಡಲಾಗಿತ್ತು.

ಕೆಲವು ಕಾಲದ ನಂತರ ವಿಜಯನಗರದ ಮಹಾರಾಜರು ಆನೆಗುಂದಿಗೆ ತಂದು, ಸುಮಾರು ಎರಡು ಶತಮಾನಗಳವರೆಗೆ ಈ ಸಿಂಹಾಸನ ಅಲ್ಲಿತ್ತು. 17ನೇ ಶತಮಾನದ ಆರಂಭದಲ್ಲಿ ವಿಜಯನಗರದ ಗವರ್ನರ್ ಇದನ್ನು ಶ್ರೀರಂಗಪಟ್ಟಣಕ್ಕೆ ತಂದು 1610ರಲ್ಲಿ ರಾಜ ಒಡೆಯರ್ ಅವರಿಗೆ ಹಸ್ತಾಂತರಿಸಿದ. ಆ ಮೂಲಕ ದಸರಾ ಉತ್ಸವಕ್ಕೆ ಚಾಲನೆ ದೊರಕಿತು.

ಶಾಸನಗಳಲ್ಲಿ ಉಲ್ಲೇಖಿಸಿರುವಂತೆ 1699ರಲ್ಲಿ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿಯೂ ಈ ಸಿಂಹಾಸನ ಇತ್ತು. ನಂತರ ಟಿಪ್ಪು ಸುಲ್ತಾನನ ಪತನದ ನಂತರ ಈ ಸಿಂಹಾಸನವನ್ನು ನಂತರ ಈ ಸಿಂಹಾಸನವನ್ನು ಶ್ರೀರಂಗಪಟ್ಟಣದ ಸುಲ್ತಾನನ ಅರಮನೆ ಕೋಣೆಯೊಂದರಲ್ಲಿ ಪತ್ತೆ ಹಚ್ಚಲಾಯಿತು. ಕೂಡಲೇ ಅದನ್ನು ದುರಸ್ತಿ ಮಾಡಿ, ಯುವರಾಜ ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು.

ಅರಮನೆ ನಗರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್:
ವಿಶ್ವವಿಖ್ಯಾತ ಮೈಸೂರು ದಸಾರಕ್ಕೆ ಚಾಲನೆ ಸಿಕ್ಕಿದ್ದು, ಅರಮನೆ ನಗರಿಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಕೇಂದ್ರದ ಮೂರು ಸೇನಾ ತುಕಡಿಗಳೂ ನಗರಕ್ಕೆ ಆಗಮಿಸಿವೆ. ಐದು ಸಾವಿರ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada