ಮಾಜಿ ಮತ್ತು ಹಾಲಿ ಸಿಎಂಗಳ ನಡುವೆ "ಶಾದಿ" ಗುದ್ದಾಟ
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2013 (14:24 IST)
ಮುಸ್ಲಿಂ ಮಹಿಳೆಯರಿಗೆ ಮತ್ತು ಮುಸ್ಲಿಂ ವಿಧವೆಯರಿಗಾಗಿ ಮಾತ್ರವೇ ಸೃಷ್ಟಿಯಾಗಿರುವ ಶಾದಿ ಭಾಗ್ಯ ಯೋಜನೆ ಇದೀಗ ಮಾಜಿ ಮತ್ತು ಹಾಲಿ ಸಿಎಂಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಎಡೆಮಾಡಿಕೊಟ್ಟಿದೆ. ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಂ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಸಿದ್ರಾಮಯ್ಯ ಶಾದಿ ಭಾಗ್ಯ ಯೋಜನೆಯನ್ನು ಘೋಷಣೆ ಮಾಡಿದ್ದಾರೆ ಎಂದು ಯಡ್ಯೂರಪ್ಪ ಆರೋಪಿಸಿದರೆ, "ಈ ಮೊದಲೇ ಬಜೆಟ್ನಲ್ಲಿ ನಾನು ಈ ಯೋಜನೆಯನ್ನು ಘೋಷಣೆ ಮಾಡಿದಾಗ ಯಾಕೆ ಯಡ್ಯೂರಪ್ಪ ಸುಮ್ಮನಿದ್ದರು?" ಎಂದು ಸಿದ್ದು ತಿರುಗೇಟು ನೀಡಿದ್ದಾರೆ.ಶಾದಿ ಭಾಗ್ಯ ಯೋಜನೆ ಕೇವಲ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರವೇ ವಿಸ್ತರಿಸಿರುವುದು ಸರಿಯಲ್ಲ. ಇತರೇ ಧರ್ಮದ, ವಿವಿಧ ಜಾತಿಗಳಲ್ಲಿಯೂ ಕೂಡ ಬಡವರ್ಗದ ಮಹಿಳೆಯರು ಇದ್ದಾರೆ. ಅವರನ್ನು ಹೊರತುಪಡಿಸಿ ಸಿಎಂ ಸಿದ್ರಾಮಯ್ಯನವರು ಕೇವಲ ಒಂದು ವರ್ಗದ ಮತವನ್ನು ಸೆಳೆಯಲು ಈ ಶಾದಿ ಭಾಗ್ಯ ಯೋಜನೆಯನ್ನು ತಂದಿದ್ದಾರೆ. ಇದು ಓಟ್ ಬ್ಯಾಂಕ್ ರಾಜಕರಣ ಎಂದು ಯಡ್ಯೂರಪ್ಪ ಸಿದ್ರಾಮಯ್ಯನವರ ವಿರುದ್ಧ ಹರಿ ಹಾಯ್ದು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ರಾಮಯ್ಯ " ಓಟ್ ಬ್ಯಾಂಕ್ ರಾಜಕಾರಣವನ್ನು ಮಾಡುತ್ತಿರುವುದು ನಾನಲ್ಲ. ಯಡ್ಯೂರಪ್ಪನವರು. ಶಾದಿ ಭಾಗ್ಯ ಯೋಜನೆಯನ್ನು ನಾನು ಬಜೆಟ್ ಸಮಯದಲ್ಲಿಯೇ ಘೋಷಿಸಿದ್ದೆ. ಆದ್ರೆ ಆಗ ವಿರೋಧವನ್ನು ವ್ಯಕ್ತಪಡಿಸದ ಯಡ್ಯೂರಪ್ಪನವರು ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ, ಓಟ್ ಬ್ಯಾಂಕ್ ರಾಜಕಾರಣ ಯಾರು ಮಮಾಡ್ತಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಯಡ್ಯೂರಪ್ಪನವರನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೆ ಅಲ್ಲ, ಶಾದಿ ಭಾಗ್ಯ ಯೋಜನೆಯನ್ನು ಇತರೇ ವರ್ಗದವರಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದೂ ಸಹ ಸಿದ್ದು ಹೇಳಿದ್ರು.ಒಟ್ಟಾರೆಯಾಗಿ ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇಬ್ಬರ ನಡುವೆ "ಶಾದಿ" ಗುದ್ದಾಟ ತಾರಕಕ್ಕೇರಿದೆ. ಮದುವೆಗೆ ಮುನ್ನವೇ ಜಗಳದ ವಿಘ್ನಗಳು ಎದುರಾಗಿವೆ. ಮುಂದೇನಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.