ಬೆಳಗಾವಿ: ಬೆಳಗಾವಿಯಲ್ಲಿ 14ನೇ ವಿಧಾನಸಭೆಯ 2ನೇ ಅಧಿವೇಶನ ಸೋಮವಾರ ವಂದೇಮಾತರಂ ಗೀತೆಯೊಂದಿಗೆ ಆರಂಭವಾಯಿತು. ಭಾರತ ರತ್ನ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಲಾಯಿತು. ಭಾರತ ರತ್ನ ಸಚಿನ್ ಅವರನ್ನು ಸಿದ್ದರಾಮಯ್ಯ ಗುಣಗಾನ ಮಾಡಿದರು. ಸಚಿನ್ ಅವರಿಗೆ ಭಾರತರತ್ನ ಬಂದಿರುವುದು ಇಡೀ ಭಾರತದ ಜನತೆಗೆ ಹೆಮ್ಮೆ ತರತಕ್ಕ ವಿಚಾರ. ಈ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ನಿರ್ಣಯ ಮಂಡಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಪ್ರೊ. ಸಿ.ಎನ್. ಆರ್. ರಾವ್ ಅವರಿಗೆ ಕೂಡ ಅಭಿನಂದನೆ ಸಲ್ಲಿಸಿದರು. ಭಾರತ ರತ್ನ ವಿಜೇತರ ಸಾಧನೆ ಬಗ್ಗೆ ಸಿದ್ದರಾಮಯ್ಯ, ವಿಪಕ್ಷ ನಾಯಕರಾದ ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಸೆಟ್ಟರ್ ಪ್ರಶಂಸೆ ವ್ಯಕ್ತಪಡಿಸಿದರು.
ನಂತರ ಅಗಲಿದ ಗಣ್ಯರಿಗೆ ಅಶ್ರುತರ್ಪಣ ಅರ್ಪಿಸಲಾಯಿತು. ನಿಧನರಾದ ಮಾಜಿಸಚಿವರುಗಳಾದ ಶಿವಪ್ಪ, ಕೆ. ವೆಂಕಟಪ್ಪ, ಮಹಾದೇವಪ್ಪ ಶಿವಪ್ಪ, ಆರ್.ಕೆ. ರಾಠೋಡ್, ಖ್ಯಾತ ಗಾಯಕ ಮನ್ನಾಡೆ ಅಗಲಿದ್ದಾರೆ. ಡಿ.ವಿ. ರಾಜೇಂದ್ರ ಬಾಬು ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಬಂದಿವೆ. ಅವರ ಸಾವಿನಿಂದ ಚಿತ್ರರಂಗಕ್ಕೆ ನಷ್ಟವಾಗಿದೆ ಎಂದು ತಿಳಿಸಿ, ಇವರೆಲ್ಲರ ನಿಧನಕ್ಕೆ ಸಂತಾಪ ಸೂಚನೆ ನಿರ್ಣಯ ಮಂಡಿಸುತ್ತೇನೆ ಎಂದು ಹೇಳಿದರು. ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು.