ಕಳೆದ 10 ವರ್ಷಗಳಿಂದ ಬೆರಳೆಣೆಕೆಯ ಸ್ಥಾನಗಳನ್ನು ಗಳಿಸುತ್ತಾ ಬಂದಿರುವ ಜಾತ್ಯಾತೀತ ಜನತಾದಳ ಜಾತ್ಯಾತೀತತೆ ಹೆಸರಿಟ್ಟುಕೊಂಡೂ ಅಧಿಕಾರಕ್ಕಾಗಿ ಬಿಜೆಪಿಯಂತಹ ಕೋಮುವಾದಿ ಪಕ್ಷಗಳ ಜೊತೆ ಕೈಜೋಡಿಸಲು ಹಿಂದೇಟು ಹಾಕುವುದಿಲ್ಲ. ಈ ಪಕ್ಷದ ಇಂತಹ ಅನೈತಿಕತೆ ನಿಲುವಿನ ಕಾರಣಕ್ಕಾಗಿ ರಾಜಕಾರಣವಿಂದು ಕುಲಗೆಟ್ಟು ಹೋಗಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಡೀ ರಾಜಕೀಯ ವ್ಯವಸ್ಥೆಯನ್ನೇ ಹಾಳು ಮಾಡುವ ಇಂತಹ ಪ್ರಾದೇಶಿಕ ಪಕ್ಷಗಳನ್ನು ಮತದಾರರು ದೂರವಿಟ್ಟು ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚಿಸಲು ಆಪರೇಷನ್ ಕಮಲ ಮಾಡಿ ರಾಜಕೀಯ ವ್ಯವಸ್ಥೆಯನ್ನೇ ಕಲುಷಿತಗೊಳಿಸಿದರು. ಅದರ ಫಲವನ್ನು ಈ ಚುನಾವಣೆಯಲ್ಲಿ ಅನುಭವಿಸುತ್ತಾರೆ ಎಂದ ಕುಮಾರ್ ಬಂಗಾರಪ್ಪ, ಕಳೆದ 5 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಬರಿಯ ರಾಜಕಾರಣ ಮಾಡಿದ ಬಿಜೆಪಿ ಮತ್ತು ಸ್ವಾರ್ಥಕ್ಕಾಗಿ ಕೆಜೆಪಿ ಕಟ್ಟಿರುವ ಯಡಿಯೂರಪ್ಪ ಯಾವ ಮುಖ ಹೊತ್ತು ರಾಜ್ಯದ ಜನತೆಯ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.