ಕಳೆದ ವರ್ಷ ಸಂಭವಿಸಿದ ಬೆಂಗಳೂರು ಸ್ಫೋಟ ಘಟನೆಗೆ ಸಂಬಂಧಪಟ್ಟಂತೆ ಬಂಧಿಸಲಾದ ಲಷ್ಕರ್ ಇ ತೊಯ್ಬಾದ ಉಗ್ರ ಸರ್ಫರಾಜ್ ನವಾಜ್ ತನಿಖೆಯಲ್ಲಿ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಬೆಂಗಳೂರು ಮತ್ತು ಚನ್ನೈ ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸುವ ಸಂಚು ರೂಪಿಸಲಾಗಿತ್ತು ಎಂದು ತಿಳಿಸಿದ್ದಾನೆ.
ಆದರೆ ಕೊನೆಗಳಿಗೆಯಲ್ಲಿ ಪಾಕಿಸ್ತಾನದಲ್ಲಿರುವ ಲಷ್ಕರ್ ಇ ತೊಯ್ಬಾ ಸಂಘಟನೆಯ ಮುಖಂಡರು ಕಾರ್ಯಯೋಜನೆಯನ್ನು ಬದಲಾವಣೆ ಮಾಡಿದ್ದರಿಂದ ಚೆನ್ನೈ ದಾಳಿ ಯೋಜನೆಯನ್ನು ಕೈಬಿಟ್ಟಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಬಾಂಗ್ಲಾದೇಶದಲ್ಲಿ ಕುಳಿತುಕೊಂಡು ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸುವ ಭಾರೀ ಸಂಚನ್ನು ರೂಪಿಸಿದ್ದ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರು ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಫೆಬ್ರುವರಿ ತಿಂಗಳಿನಲ್ಲಿ ಸರ್ಫರಾಜ್ನನ್ನು ಪೊಲೀಸರು ಬಂಧಿಸಿದ್ದರು.