ಬಿಜೆಪಿ ಮಂದಿ ಲೂಟಿಕೋರರು, ಅತ್ಯಾಚಾರಿಗಳಾದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾನಗೆಟ್ಟವ...ಹೀಗೆ ವಾಗ್ದಾಳಿ ನಡೆಸಿದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ.
ಹಾಸನದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿಯವರು ರಾಜ್ಯದಲ್ಲಿ ಲಕ್ಷ ಕೋಟಿ ಹಣ ಲೂಟಿ ಮಾಡಿದ ಲೂಟಿಕೋರರು ಮಾತ್ರವೇ ಅಲ್ಲ. ಅತ್ಯಾಚಾರಿಗಳು. ಯಡಿಯೂರಪ್ಪ ಮಾನಗೆಟ್ಟವ ಎಂದರು.
ತಮ್ಮ ಕೈಯ ಎರಡು ಬೆರಳುಗಳನ್ನು ಎತ್ತಿ ತೋರಿಸುವುದು ವಿಜಯದ ಸಂಕೇತ. ಆದರೆ ಯಡಿಯೂರಪ್ಪ ಜೈಲಿಗೆ ಹೋಗುವಾಗ ಮತ್ತು ಬರುವಾಗ ವಿಜಯ ಸಂಕೇತ ಪ್ರದರ್ಶಿಸುತ್ತಾನೆ. ಜಾಮೀನು ಸಿಕ್ಕಾಗ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಹಾಗಾಗಿ ಯಡಿಯೂರಪ್ಪ ಮಾನಗೆಟ್ಟ ವ್ಯಕ್ತಿಯಲ್ಲದೆ ಇನ್ನೇನು ಎಂದು ಪ್ರಶ್ನಿಸಿದರು.
ಇಂತಹ ಲೂಟಿಕೋರರು, ಮಾನಗೆಟ್ಟವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಕಾರಣ ಎಂದು ಆರೋಪಿಸಿದರು.