ಪತ್ನಿಯನ್ನು ಇರಿದು ಕೊಂದು ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ
, ಶನಿವಾರ, 21 ಸೆಪ್ಟಂಬರ್ 2013 (13:01 IST)
ಬೆಂಗಳೂರು: ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ತಮ್ಮ ಪತ್ನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿ ನಂತರ 13ನೇ ಮಹಡಿಯ ತಮ್ಮ ನಿವಾಸದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಜೆಪಿ ನಗರದಲ್ಲಿ ಶುಕ್ರವಾರ ರಾತ್ರಿ ವರದಿಯಾಗಿದೆ. ಮಧುಸೂದನ್ ಎಂಬ ಹೆಸರಿನ ಸಾಫ್ಟ್ವೇರ್ ಎಂಜಿನಿಯರ್ ತಮ್ಮ ಪತ್ನಿಯ ಜತೆ ಜಗಳವಾಡಿಕೊಂಡ ನಂತರ ಚೂರಿಯಿಂದ ಇರಿದು ಹತ್ಯೆ ಮಾಡಿದರು. ಅವರ ಪತ್ನಿ ಸಹ ಸಾಫ್ಟ್ವೇರ್ ಎಂಜಿನಿಯರ್ ವೃತ್ತಿಯಲ್ಲಿದ್ದ.ರು ಎಂದು ಡಿಸಿಪಿ ರೇವಣ್ಣ ತಿಳಿಸಿದ್ದಾರೆ.ಆಕ್ರೋಶದ ಭರದಲ್ಲಿ ಮದುಸೂಧನ್ ಚೂರಿಯೊಂದನ್ನು ತೆಗೆದುಕೊಂಡು ಪತ್ನಿಯ ದೇಹದ ಅನೇಕ ಕಡೆ ಚೂರಿಯಿಂದ ಇರಿದರು. ನಂತರ ಸೀಲಿಂಗ್ ಫ್ಯಾನಿನಿಂದ ಹಗ್ಗ ಇಳಿಬಿಟ್ಟು ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಹಗ್ಗ ಹರಿದುಹೋಗಿದ್ದರಿಂದ ಅದೂ ವಿಫಲವಾಯಿತು.ನಂತರ ಅವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ ಬೆಂಕಿಪೊಟ್ಟಣಕ್ಕಾಗಿ ಹುಡುಕಿದರೂ ಸಿಗಲಿಲ್ಲ. ಅಂತಿಮವಾಗಿ ತಮ್ಮ ಫ್ಲಾಟ್ನ 13ನೇ ಮಹಡಿಯಿಂದ ಕೆಳಕ್ಕೆ ಬಿದ್ದು ದಾರುಣ ಸಾವನ್ನಪ್ಪಿದರು ಎಂದು ಅವರು ತಿಳಿಸಿದ್ದಾರೆ. ಈ ದುರ್ಘಟನೆ ನಡೆದಾಗ ಅವರ 6 ವರ್ಷ ವಯಸ್ಸಿನ ಪುತ್ರಿ ಅದೇ ಪ್ರದೇಶದಲ್ಲಿರುವ ಅವಳ ತಾತನ ಮನೆಯಲ್ಲಿದ್ದಳು ಎಂದು ಅವರು ಹೇಳಿದ್ದಾರೆ.