ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರ ಪರಮಾಪ್ತರಾದ ಸಚಿವ ರೇಣುಕಾಚಾರ್ಯ, ಶಾಸಕ ಬೇಳೂರು ಗೋಪಾಲಕೃಷ್ಣ ಅಖಾಡಕ್ಕಿಳಿಯುವ ಮೂಲಕ ಬ್ಯಾಟಿಂಗ್ ಆರಂಭಿಸಿದ್ದಾರೆ.
ಈಶ್ವರಪ್ಪನವರು ನಿರಂತರವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದು ಬಿಎಸ್ವೈ ಹೇಳಿಕೆ ನೀಡಿದ್ದಾರೆ. ಯಾಕಂದ್ರೆ ಅವರು ನಾಲ್ಕು ದಶಕಗಳಿಂದ ಹೋರಾಟ ನಡೆಸಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ಪಕ್ಷದೊಳಗಿನ ಕೆಲವು ಮುಖಂಡರ ಪಿತೂರಿಯಿಂದ ಯಡಿಯೂರಪ್ಪ ಜೈಲುಶಿಕ್ಷೆ ಅನುಭವಿಸುವಂತಾಯಿತು. ಅವರು ಯಾವುದೇ ತಪ್ಪು ಮಾಡದೆ ಜೈಲುಶಿಕ್ಷೆ ಅನುಭವಿಸಿದ್ದರಿಂದ ಸಾಕಷ್ಟು ನೊಂದಿದ್ದರು. ಹಾಗಾಗಿ ಪಕ್ಷದ ವರಿಷ್ಠರು ಯಡಿಯೂರಪ್ಪನವರಿಗೆ ಸಾಂತ್ವನ ಹೇಳಬೇಕಿತ್ತು ಎಂದು ಈ ಸಂದರ್ಭದಲ್ಲಿ ಹೇಳಿದರು.
ಮತ್ತೊಂದೆಡೆ ಯಡಿಯೂರಪ್ಪನವರ ಹೇಳಿಕೆಗೆ ಸಾಥ್ ನೀಡಿರುವ ಶಾಸಕ ಗೋಪಾಲಕೃಷ್ಣ ಬೇಳೂರು, ಯಡಿಯೂರಪ್ಪ ವಿರುದ್ಧ ಯಾರು ಹೇಳಿಕೆಯನ್ನು ಕೊಟ್ಟರೂ ಸಹಿಸುವುದಿಲ್ಲ. ಯಡಿಯೂರಪ್ಪ ಪಕ್ಷ ಕಟ್ಟಿದ ಹಿರಿಯ ಮುಖಂಡರು. ಅವರನ್ನು ನಿರ್ಲಕ್ಷಿಸಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪಕ್ಷದ ನಾಯಕತ್ವ ಯಾರು ವಹಿಸಿಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ಕೂಡಲೇ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದು ತಾಕೀತು ಮಾಡಿರುವ ಬೇಳೂರು, ಸಂಕ್ರಾಂತಿ ನಂತರ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು. ಈ ಮೂಲಕ ಯಡಿಯೂರಪ್ಪ ಟೀಮ್ ಒಬ್ಬೊಬ್ಬರಾಗಿಯೇ ಅಖಾಡಕ್ಕಿಳಿಯುವ ಮೂಲಕ ಬಿಜೆಪಿ ಪಕ್ಷದ ನಾಯಕತ್ವ ವಿಚಾರ ಮತ್ತೊಮ್ಮೆ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ನೀಡಿದೆ.