ಬೆಂಗಳೂರು: ನಮ್ಮದು ಈಗಲೂ ಸ್ವಚ್ಛ ಸಂಪುಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿದ್ದಾರೆಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಹೊಸ ಸಚಿವರ ವಿರುದ್ಧ ಆರೋಪಗಳಿವೆಯಷ್ಟೇ. ಆದರೆ ಆರೋಪಗಳು ಸಾಬೀತಾಗಿಲ್ಲ. ಅರೋಪಿಗಳೆಲ್ಲರೂ ಅಪರಾಧಿಗಳಲ್ಲ, ಆರೋಪ ಸಾಬೀತಾದ ನಂತರ ಅಪರಾಧಿಗಳಾಗುತ್ತಾರೆ. ಸಚಿವರ ವಿರುದ್ಧ ಖಾಸಗಿ ದೂರುಗಳು ಮಾತ್ರ ದಾಖಲಾಗಿವೆ ಎಂದು ಸಿಎಂ ಹೇಳಿದರು. ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.
ನಾವು ರಾಜೀನಾಮೆ ನೀಡುವಂತೆ ಬಲವಂತ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಸಂತೋಷ್ ಲಾಡ್ ರಾಜೀನಾಮೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು. ಸಂತೋಷ್ ಲಾಡ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಕಳಂಕಿತರೆಂಬ ಪಟ್ಟ ಹೊತ್ತಿರುವ ಡಿಕೆಶಿ ಮತ್ತು ರೋಷನ್ ಬೇಗ್ ಅವರಿಗೆ ಸಚಿವ ಸ್ಥಾನ ನೀಡಿದ್ದೇಕೆ ಎಂಬ ಪ್ರಶ್ನೆಗೆ ಸಿಎಂ ಮೇಲಿನಂತೆ ಉತ್ತರಿಸಿದರು.