ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಿದ್ದ ಅರಣ್ಯ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕೆಎಂಎಫ್ ಅಧ್ಯಕ್ಷ, ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ 13 ಜನರ ವಿರುದ್ಧ ಗುರುವಾರ ಚಾರ್ಜ್ಶೀಟ್ ದಾಖಲಿಸಲಾಗಿದೆ.
2009 ರಲ್ಲಿ ಅರಣ್ಯ ಸಂರಕ್ಷಣಾ ಅಧಿಕಾರಿ ಯು.ವಿ.ಸಿಂಗ್ ಅವರು ಸಂಡೂರು ತಾಲೂಕಿನ ರಾಮಗಡಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೋಮಶೇಖರ್ ರೆಡ್ಡಿ ಹಾಗೂ ಬಳ್ಳಾರಿ ಕಾರ್ಪೊರೇಟರ್ ಕೆ.ಎಸ್.ದಿವಾಕರ್ ಅವರಿಗೆ ಜೀವ ಬೆದರಿಕೆ ಹಾಕಿದ್ದರು ಎಂದು ಅರಣ್ಯಾಧಿಕಾರಿ ರಾಮಲಿಂಗಯ್ಯ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಡಿಎಸ್ಪಿ ಡಿ.ನಾಗರಾಜ್ ಅವರು ಗುರುವಾರ 125 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ಪ್ರಕರಣದಲ್ಲಿ ಸೋಮಶೇಖರ ರೆಡ್ಡಿ ಪ್ರಮುಖ ಆರೋಪಿಯಾಗಿದ್ದಾರೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬೇಲ್ ಡೀಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಸೋಮಶೇಖರ ರೆಡ್ಡಿ ಈಗ ನ್ಯಾಯಾಂಗ ಬಂಧನದಲ್ಲಿದ್ದು, ಹೈದರಾಬಾದ್ ಚರ್ಲಪಲ್ಲಿ ಜೈಲಿನಲ್ಲಿದ್ದಾರೆ.