ಇಲ್ಲಿನ ಕೇಂದ್ರ ಕಾರಾಗೃಹದಿಂದ ಇಬ್ಬರು ಖತರ್ನಾಕ್ ಖೈದಿಗಳು ನೆನ್ನೆ ಪರಾರಿಯಾಗಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಡಿಐಜಿ ರಾಜೇಂದ್ರ ಅವರು ಐವರು ಸಿಬ್ಬಂದಿಗಳ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಭದ್ರತಾ ಸಿಬ್ಬಂದಿಗಳ ಕಾರ್ಯ ವೈಫಲ್ಯವೇ ಖೈದಿಗಳ ಪರಾರಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಐವರು ಭದ್ರತಾ ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಡಿಐಜಿ ರಾಜೇಂದ್ರ ಅವರು ಈಗಾಗಲೇ ಅಮಾನತ್ತು ಆದೇಶವನ್ನು ಹೊರಡಿಸಿದ್ದು, ಖೈದಿಗಳ ಪರಾರಿ ಪ್ರಕರಣಕ್ಕೆ ಐವರು ತಲೆದಂಡ ತೆತ್ತಿದ್ದಾರೆ.
22 ವರ್ಷದ ರೇಬಣ್ಣ ಮತ್ತು 23 ವರ್ಷದ ಅಯ್ಯಾಳಪ್ಪ ಎಂಬ ಇಬ್ಬರು ಖೈದಿಗಳು ನೆನ್ನೆ ಬಳ್ಳಾರಿಯ ಕೇಂದ್ರ ಕಾರಾಗೃಹದಿಂದ ಜೈಲು ಕಂಬಿಗಳನ್ನು ಮುರಿದು, ಜೈಲಿನ ಎತ್ತರದ ಗೋಡೆ ಹಾರಿ ಪರಾರಿಯಾಗಿದ್ದರು. ಇವರು 2012 ರಲ್ಲಿ, ಒಂದೇ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹವನ್ನು ಸೇರಿದ್ದರು.