Select Your Language

Notifications

webdunia
webdunia
webdunia
webdunia

'ಕೈ' ಸೋಲಿಗೆ ಕೆಪಿಸಿಸಿ ಕಚೇರಿ ವಾಸ್ತುದೋಷ ಕಾರಣ!

'ಕೈ' ಸೋಲಿಗೆ ಕೆಪಿಸಿಸಿ ಕಚೇರಿ ವಾಸ್ತುದೋಷ ಕಾರಣ!
ಬೆಂಗಳೂರು , ಗುರುವಾರ, 7 ಏಪ್ರಿಲ್ 2011 (11:20 IST)
PR
ರಾಜ್ಯ ರಾಜಕಾರಣದಲ್ಲಿ ವಾಮಚಾರ, ಹೋಮ, ಹವನ ಪ್ರಮುಖವಾಗುತ್ತಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸತತವಾಗಿ ಸೋಲಲು ಕೆಪಿಸಿಸಿ ಕಚೇರಿಯ ವಾಸ್ತುವೇ ಕಾರಣ ಎಂದು ವಾಸ್ತುಶಾಸ್ತ್ರಜ್ಞರು ಸಲಹೆ ನೀಡಿದ್ದಾರೆನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯನ್ನು ತರಾತುರಿಯಲ್ಲಿ ನವೀಕರಣ ಮಾಡಲಾಗುತ್ತಿದೆ.

2008 ವಿಧಾನಸಭೆ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನ್ನನುಭವಿಸಿರುವುದಕ್ಕೆ ಕೊನೆಗೂ ಉತ್ತರ ಕಂಡುಕೊಂಡಿದೆ. ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ವಾಸ್ತುದೋಷವೇ ಸೋಲಿಗೆ ಕಾರಣ ಎಂದು ವಾಸ್ತುಶಾಸ್ತ್ರಜ್ಞರು ತಿಳಿಸಿದ್ದಾರಂತೆ!

ಅಂತೂ ವಾಸ್ತುಶಾಸ್ತ್ರಜ್ಞರ ಸಲಹೆಯಂತೆ, ಕೆಪಿಸಿಸಿ ಕಚೇರಿಯ ಒಳಭಾಗದಲ್ಲಿನ ಮೊದಲ ಮಹಡಿಯ ಮೆಟ್ಟಿಲು ದೇವ ಮೂಲೆಯಲ್ಲಿರುವುದು ದೋಷಕ್ಕೆ ಕಾರಣ ಎನ್ನಲಾಗಿದೆ. ಹಾಗಾಗಿ ಈಗ ಕಚೇರಿಯೊಳಗಿನ ಬಲಭಾಗದ ಮೆಟ್ಟಿಲು ಒಡೆದು, ಎಡಭಾಗದಲ್ಲಿ ಹೊಸದಾಗಿ ಮೆಟ್ಟಿಲು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ.

ಅದೇ ರೀತಿಯಲ್ಲಿ ಬಲಭಾಗದ ಮೆಟ್ಟಿಲಿದ್ದ ಜಾಗದಲ್ಲಿ ಮೂರು ಕೊಠಡಿ ನಿರ್ಮಿಸಲು ವಾಸ್ತುಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. ಅದರಂತೆ ಕೆಪಿಸಿಸಿ ಕಚೇರಿಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಯಾವ ಮುಖಂಡರೂ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಗೆಲುವು ಸಾಧಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Share this Story:

Follow Webdunia kannada