ಕಾಂಗ್ರೆಸ್ ಸರ್ಕಾರವನ್ನು ತಂದ ಅಕ್ಷಮ್ಯ ಅಪರಾಧ ಮಾಡಿದ್ದೇವೆ: ಯಡಿಯೂರಪ್ಪ
, ಗುರುವಾರ, 9 ಜನವರಿ 2014 (12:50 IST)
ಬೆಂಗಳೂರು: ಬಹಳ ಸೂಕ್ಷ್ಮವಾಗಿ ರಾಜ್ಯದ, ದೇಶದ ಜನ ಸ್ಪಂದಿಸುತ್ತಿದ್ದಾರೆ. ನಾವು ಎಷ್ಟು ಪ್ರಾಮಾಣಿಕವಾಗಿ ನಮ್ಮೆಲ್ಲ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ಕೆಲಸಮಾಡುವುದರ ಮೇಲೆ ನಮ್ಮ ಶಕ್ತಿ ಅವಲಂಬಿತವಾಗಿದೆ. ಕಾಂಗ್ರೆಸ್ನಂತ ಕೆಟ್ಟ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತಂದ ಅಕ್ಷಮ್ಯ ಅಪರಾಧವನ್ನು ನಾವು ಮಾಡಿದ್ದೇವೆ. ಅದಕ್ಕಾಗಿ ಪಶ್ಚಾತ್ತಾಪ ಪಟ್ಟು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಿಂದ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಬಿಜೆಪಿಗೆ ಮರುಸೇರ್ಪಡೆಯಾಗಿರುವ ಯಡಿಯೂರಪ್ಪ ಹೇಳಿದರು. ನರೇಂದ್ರ ಮೋದಿಯರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ತಕ್ಷಣ ನಾನು ಬಿಜೆಪಿಗೆ ಸೇರಲು ತೀರ್ಮಾನಿಸಿದೆ. ಈ ದೇಶದ ಪ್ರಧಾನಿಯಾಗುವ ಶಕ್ತಿ ನರೇಂದ್ರ ಮೋದಿ ಅವರಿಗೆ ಮಾತ್ರವಿದೆ. ಈ ದೇಶಕ್ಕೆ ಸಮರ್ಥ ನಾಯಕತ್ವವಿಲ್ಲದೇ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊರದೇಶದವರು ಮತ್ತು ಭಾರತೀಯರು ಈ ಕುರಿತು ಮಾತಾಡ್ತಿದ್ದಾರೆ. ನಮ್ಮ ದುರ್ದೈವ ಕಾಂಗ್ರೆಸ್ 5 ವರ್ಷಗಳ ಕಾಲ ಪೂರ್ಣ ಆಡಳಿತ ಮಾಡಿದೆ. ನರೇಂದ್ರ ಮೋದಿಯಂಥ ವ್ಯಕ್ತಿ ಗುಜರಾತಿನಲ್ಲಿ ಅಭಿವೃದ್ಧಿ ಮಾಡಿ ತೋರ್ಸಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ನಲ್ಲಿ ನಾಯಕತ್ವವಿಲ್ಲದೇ ಇಂತಹ ದುಸ್ಥಿತಿಗೆ ಮರಳಿರುವುದು ಇದೇ ಮೊದಲು. ದೇಶದ ಜನ ಬದಲಾವಣೆ ಬಯಸಿದಂತ ಸಂದರ್ಭದಲ್ಲೇ ಮೋದಿಯರವನ್ನು ಬಿಜೆಪಿ ಪ್ರೊಜೆಕ್ಟ್ ಮಾಡುವ ಮೂಲಕ ದೇಶಕ್ಕೆ ಒಂದು ಸಮರ್ಥ ನಾಯಕತ್ವದ ಮುನ್ನುಡಿ ಬರೆದಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.