ಎಸ್.ಆರ್.ಹಿರೇಮಠ್ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ಯತ್ನ?
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2013 (11:27 IST)
ಕಾಂಗ್ರೆಸ್ ಸಚಿವರಾಗಿರುವ ಸಂತೋಷ್ ಲಾಡ್ ಅವರ ಅಕ್ರಮ ಗಣಿಗಾರಿಕೆಯ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿರುವ ಧಾರವಾಡದ ಸಮಾಜ ಪರಿವರ್ತನಾ ಟ್ರಸ್ಟ್ ಮುಖ್ಯಸ್ಥ ಎಸ್.ಆರ್. ಹೀರೆಮಠ ಅವರನ್ನು ಕಾಂಗ್ರೆಸ್ ಸರ್ಕಾರ ಕಟ್ಟಿ ಹಾಕಲು ಯತ್ನಿಸುತ್ತಿದೆಯೇ? ಹೀಗೊಂದು ಪ್ರೆಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಯಾಕಂದ್ರೆ ಸಂತೋಷ್ ಲಾಡ್ ವಿರುದ್ದ ಅಕ್ರಮ ಗಣಿಗಾರಿಕೆಯ ದಾಖಲೆಗಳನ್ನು ಬಿಡುಗಡೆ ಮಾಡಿದ ಎಸ್ ಆರ್ ಹಿರೇಮಠ್ ವಿರುದ್ಧ ತನಿಖೆ ನಡೆಸಲು ಇದೀಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಮುಂದಾಗಿದೆ.ಎಸ್ ಆರ್ ಹಿರೇಮಠ್ ಅವರು ಧಾರವಾಡದಲ್ಲಿ ಸಮಾಜ ಪರಿವರ್ತನಾ ಟ್ರಸ್ಟ್ ಸ್ಥಾಪಿಸಿ, ತನ್ಮೂಲಕ ವಿದೇಶದಿಂದ ಹಣದ ಸಹಾಯವನ್ನು ಪಡೆಯುತ್ತಿದ್ದಾರೆ. ಈ ವಿಷಯದಲ್ಲಿ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ, ವಿದೇಶೀ ಹಣದ ಸಹಾಯವನ್ನು ಎಸ್.ಆರ್.ಹಿರೇಮಠ್ ಪಡೆಯುತ್ತಿದ್ದಾರೆ ಎಂದು ಬಳ್ಳಾರಿ ಗಣಿ ಉದ್ಯಮಿ ಟಪಾಲ್ ಗಣೇಶ್ ಸರ್ಕಾರಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಸರ್ಕಾರ ಹಿರೇಮಠ್ ವಿರುದ್ಧ ಸೂಕ್ತ ತನಿಖೆಯನ್ನು ಕೈಗೊಳ್ಳಲು ನಿರ್ಧರಿಸಿದೆ.ಮೇಲ್ನೋಟಕ್ಕೆ ಟಪಾಲ್ ಗಣೇಶ್ ಅವರ ದೂರನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ, ಎಸ್.ಆರ್.ಹಿರೇಮಠ್ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್ ಪ್ರಯತ್ನಿಸುತ್ತಿತ್ತು. ಈ ನಿಟ್ಟಿನಲ್ಲಿ ಟಪಾಲ್ ಗಣೇಸ್ ಅವರ ಈ ದೂರು ಇನ್ನಷ್ಟು ಪುಷ್ಟಿ ನೀಡಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ,.