ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಂದನ್ ನಿಲೇಕಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಬಿಜೆಪಿಯ ಅನಂತ್ ಕುಮಾರ್ ವಿರುದ್ಧ ನಂದನ್ ನಿಲೇಕಣಿ ಕಣಕ್ಕಿಳಿಯಲಿದ್ದಾರೆ. ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ಐಟಿ ದೈತ್ಯ ಇನ್ಫೋಸಿಸ್ ಸಹಸಂಸ್ಥಾಪಕರಾಗಿದ್ದು, ತಾವು ಚುನಾವಣೆಗೆ ನಿಲ್ಲಲು ಸಿದ್ಧರಾಗಿದ್ದು, ಕಾಂಗ್ರೆಸ್ ತಮ್ಮನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ ಸ್ಪರ್ಧಿಸಲು ಸಿದ್ಧವಿರುವುದಾಗಿ ಅನೇಕ ಬಾರಿ ಹೇಳಿದ್ದರು. ಕರ್ನಾಟಕ ಕಾಂಗ್ರೆಸ್ ಕೆಲವು ಮುಖಂಡರು ನಿಲೇಕಣಿ ಅವರನ್ನು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವುದಕ್ಕೆ ವಿರೋಧ ಸೂಚಿಸಿದ್ದರು. ಆದರೆ ಕಾಂಗ್ರೆಸ್ ಪ್ರಚಾರದ ಸಾರಥ್ಯ ವಹಿಸಿರುವ ರಾಹುಲ್ ಆದೇಶ ನೀಡಿರುವ ಹಿನ್ನಲೆಯಲ್ಲಿ, ಈ ಕುರಿತು ಮತ್ತೆ ಯಾವ ನಾಯಕರೂ ಅಪಸ್ವರ ಎತ್ತುವುದಿಲ್ಲ ಎಂದು ಭಾವಿಸಲಾಗಿದೆ.
1970 ರ ದಶಕದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ದಕ್ಷಿಣ ಲೋಕಸಭೆ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಈ ಕ್ಷೇತ್ರದಿಂದ 5 ಬಾರಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ನಿಲೇಕಣಿ ಅವರ ರಾಜಕೀಯ ಪ್ರವೇಶದ ಊಹಾಪೋಹ ಗರಿಗೆದರಿಕೊಂಡಿತ್ತು. ಕಳೆದ ತಿಂಗಳು ಅವರು ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಬಳಿಕ ಈ ವದಂತಿಗಳಿಗೆ ರೆಕ್ಕೆ ಪುಕ್ಕ ಸಿಕ್ಕಿತ್ತು.
ಭಾರತದಲ್ಲಿ ಬಹಳಷ್ಟು ಬದಲಾವಣೆಯ ಅಗತ್ಯವಿರುವುದರಿಂದ ನಾನು ರಾಜಕೀಯ ರಂಗದಲ್ಲಿ ಏನಾದರೂ ಮಾಡಲು ಆಸಕ್ತಿವಹಿಸಿದ್ದೇನೆ. ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುವುದಾಗಿ ನಿಲೇಕಣಿ ಹೇಳಿದ್ದರು.ಕಾಂಗ್ರೆಸ್ ಸುದೀರ್ಘಾವಧಿಯ ಸುಧಾರಣೆಗೆ ಮುಡಿಪಾಗಿರುವುದರಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಯಸುವುದಾಗಿ ಹೇಳಿದ್ದರು. 58 ವರ್ಷ ವಯಸ್ಸಿನ ನಿಲೇಕಣಿ ಸರ್ಕಾರದ ಬೃಹತ್ ಆಧಾರ್ ಕಾರ್ಡ್ ಯೋಜನೆಯ ಉಸ್ತುವಾರಿ ವಹಿಸಿದ್ದಾರೆ.