ಡಿ.ಕೆ.ಸುರೇಶ್ ಸೋಲಿಸಲು ಪಣತೊಟ್ಟಿರುವ ಹಿರೇಮಠ್
, ಸೋಮವಾರ, 31 ಮಾರ್ಚ್ 2014 (15:52 IST)
ಬೆಂಗಳೂರು: ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಪಣತೊಟ್ಟಿದ್ದು, ಇದಕ್ಕಾಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರ ಪರವಾಗಿ ಪ್ರಚಾರಕ್ಕೆ ನಿಂತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಭ್ರಷ್ಟರ ಪಟ್ಟಿಯಲ್ಲಿ ಸೇರಿಸಿದ್ದ ಹಿರೇಮಠ್, ಬಳ್ಳಾರಿ ರಿಪಬ್ಲಿಕ್ನ ಜನಾರ್ದನ ರೆಡ್ಡಿ ಜೈಲು ಸೇರಿದರು ಈಗ ಕನಕಪುರ ರಿಪಬ್ಲಿಕ್ ಷುರುವಾಗಿದೆ ಎಂದು ಆರೋಪಿಸಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ವಿದ್ಯಾವಂತ ಕ್ರಿಮಿನಲ್ ಎಂದು ಟೀಕಿಸಿದ ಹಿರೇಮಠ್, ಕನಕಪುರದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ ಜನರಿಗೆ ಬೆಂಬಲಿಸಬೇಡಿ ಎಂದು ಮನವಿ ಮಾಡಿದರು.ಹಿರೇಮಠ್, ಕನಕಪುರ ತಾಲೂಕಿನ ಹಾರೋಹಳ್ಳಿ, ಕನಕಪುರ ಟೌನ್, ರಾಮನಗರ ಹಾಗೂ ಸಾತನೂರಿನಲ್ಲಿ ಶನಿವಾರ ಪ್ರಚಾರ ನಡೆಸಿದರು. ಸೋಮವಾರವೂ ಅವರು ಕ್ಷೇತ್ರದ ಹಲವು ಕಡೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಳ್ಳಾರಿ ರಿಪಬ್ಲಿಕ್ ರೀತಿಯಲ್ಲಿಯೇ ಕನಕಪುರ ರಿಪಬ್ಲಿಕ್ ಗೆ ತಾರ್ಕಿಕ ಅಂತ್ಯ ಕಾಣಿಸುವ ತನಕ ತಾವು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದು ಹಿರೇಮಠ್ ಹೇಳಿದರು.