Select Your Language

Notifications

webdunia
webdunia
webdunia
webdunia

ಅಗೋಚರ...

ಅಗೋಚರ...

ನಾಗೇಂದ್ರ ತ್ರಾಸಿ

ಎಂದಿನಂತೆ ರದ್ದಿ ಅಂಗಡಿಗಳಿಂದ ತಂದ, ವಿಜ್ಞಾನಕ್ಕೆ ಸಂಬಂಧಪಟ್ಟ ಹಳೆ ಮ್ಯಾಗಜಿನ್‌‌ಗಳನ್ನು ಕಲೆಹಾಕಿಕೊಂಡು ವೆಂಕಟಾಚಲ ಕುಳಿತಿದ್ದ. ಸೈನ್ಸ್ ಆಫ್ ಎನಿಮಲ್ ಸೈನ್ಸ್‌ನಲ್ಲಿ ಡಾ. ಕೆಲ್ಲಿ, ಡಿಎನ್ಎ ಬಗ್ಗೆ ಬರೆದ ಲೇಖನ ಅವನ ಮನಸ್ಸನ್ನು, ಗೋಕಾಕ್ ಫಾಲ್ಸ್‌ನ ರೋಪ್‌ವೇ ಬ್ರಿಡ್ಜ್ ತರಹ ಅತ್ತಿತ್ತ ಅಲುಗಾಡಿಸುತ್ತಿತ್ತು.

ಇದ್ಹೇಗೆ ಸಾಧ್ಯ? ಸಾವಿರ ವರ್ಷಗಳ ಹಿಂದಿನ ಮಾನವನಿಗೂ, ಇಂದಿನ ಮಾನವನಿಗೂ ಅಜಗಜಾಂತರ ವ್ಯತ್ಯಾಸ ಇದೆ. ಸಾವಿರ ವರ್ಷ ಹಿಂದೆ ಇದ್ದ ಡಿಎನ್ಎ ಕಣಗಳಲ್ಲಿನ ವಂಶಾವಳಿ ಗುಣಗಳು ಇಂದಿಗೂ ಸುಪ್ತಾವಸ್ಥೆಯಲ್ಲಿ ಇವೆ. ಅದರ ಜೊತೆಗೆ ಇನ್ನೊಂದು ಮಾತು ಸೇರಿಸಿದ್ದಾನೆ. ಇನ್ನಾವುದೋ ಡಿಎನ್ಎ ಕಣಗಳು ಇಂದಿನ ಮಾನವನ ಜೀವಕೋಶಗಳಲ್ಲಿ ಅಡಗಿವೆ ಎಂದು ಹೇಳಿದ್ದಾನೆ. ಅದು ಏನು ?

ಸುಮ್ಮನೆ ತಲೆ ಕೆಡಿಸಿಕೊಂಡರೆ ಉಪಯೋಗ ಇಲ್ಲ. ಡಾ. ಜೋಷಿ ಹತ್ತಿರ ವಿಚಾರಿಸಿದರೆ ಒಳ್ಳೆಯದು ಎಂದು ಕೊಂಡವನೇ ಮೊಬೈಲ್ ಕೈಗೆತ್ತಿಕೊಂಡ. ಅತ್ತಲಿಂದ- ಹಲೋ ಡಾ. ಜೋಷಿ ಸ್ಪೀಕಿಂಗ್... ಎಂದು ಉತ್ತರ ಬರುತ್ತಲೇ,
"ಸರ್ ವೆಂಕಟ್"
"ಏನಯ್ಯಾ ಎಲ್ಲಿದ್ದಿ, ಎನ್ ಸಮಾಚಾರ ?"
"ಸರ್, ಕೆಲ್ಲಿ ಬರೆದ ಡಿಎನ್ಎ ಬಗ್ಗೆ ಓದಿದೆ. ಒಂದಿಷ್ಟು ಡೌಟ್ಸ್‌ಗಳಿದ್ದವು. ಅದಕ್ಕೆ ಫೋನ್ ಮಾಡಿದ್ದು".
"ಹೂಂ... ನಾನೂ ಓದಿದೀನಿ. ಬಹುಶಃ ನೀನು Other DNA ಅಂತ ಹೇಳಿದ್ದಾನಲ್ಲ... ಅದಕ್ಕೆ ತಲೆ ಕೆಡಿಸ್ಕಂಡಿದಿಯಾ ಅಂತಾನೂ ಗೊತ್ತು. ಭಾರತೀಯ ಜ್ಯೋತಿಷ್ಯ ಶಾಸ್ತ್ರವನ್ನು ಒಂದು ಸಲ ಪರಿಶೀಲಿಸು. ಬೇಕಿದ್ದರೆ ಯಾರಾದರೂ ಅಂತಹ ಶಾಸ್ತ್ರ ಪರಿಣತರು, ಅದೂ ವೈಜ್ಞಾನಿಕ ದೃಷ್ಟಿಯಿಂದ ನೋಡುವವರು ಯಾರಾದರೂ ಸಿಗುತ್ತಾರೋ.. ನೋಡು. ಸಮಸ್ಯೆಗೆ ಪರಿಹಾರ ಸಿಗಬಹುದು. ಬೇಕಿದ್ದರೆ ಇದೇ ವಿಷಯದಲ್ಲಿ ಸಂಶೋಧನೆಯನ್ನು ಕೈಗೆತ್ತಿಕೋ.. ಹ್ಯಾಗೂ ಫ್ರೀ ಇದ್ದಿಯಾ..."

"ಸರ್ ಸಮಸ್ಯೆ ಅದೇ ಆಗಿದ್ದರೂ Other DNAಗಳ ಪಾತ್ರ ಏನು ಅನ್ನೋದು ತಲೆಗೆ ಹೊಳೆಯುತ್ತಿಲ್ಲ. ಅವುಗಳು ಸುಪ್ತ ಅವಸ್ಥೆಯಲ್ಲಿ ಇವೆ ಅಂತ ಬೇರೆ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ."
"ಅದಕ್ಕೇ ಮರಿ ಹೇಳಿದ್ದು.... ಪ್ರಾಚೀನ ಭಾರತೀಯ ತತ್ವಶಾಸ್ತ್ರಗಳಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಸರದ ಮೇಲೆ ಅಗೋಚರ ಶಕ್ತಿಯ ಪ್ರಭಾವ ಇದೆ, ಆ ಪ್ರಭಾವಕ್ಕೆ ಮನುಷ್ಯನೂ ಹೊರತಲ್ಲ ಎಂದು. Other DNAಗಳು ಆ ಪ್ರಭಾವ ಶಕ್ತಿಯೊಂದಿಗೆ ಅಗೋಚರ ಸಂಬಂಧ ಇಲ್ಲವೇ ಅಲ್ಲಿ ಆಗುವ ಬದಲಾವಣೆಗಳಿಗೆ ಸ್ಪಂದಿಸುತ್ತಿದ್ದರೆ ಏನು ಮಾಡ್ತಿಯಾ" ?
"Thank you sir... ಇಷ್ಟು ಸಾಕು ಮುಂದೆ ಸಾಗಲು" ಎಂದು ಹೇಳಿದವನೆ ವೆಂಕಟಾಚಲ ಫೋನಿಟ್ಟ.

"ಅಪ್ಪಾ, ಇಂದು ನಕ್ಷತ್ರ ಯಾವುದು?"
"ಮೂಲಾ ಕಣಪ್ಪ.. ಎಂದೂ ನಕ್ಷತ್ರ- ತಿಥಿ ಅಂತ ಕಣಿ ಕೇಳ್ತಿದಿಯಾ" ಎಂದು ಅಪ್ಪ ಮಾಡಿದ ಪ್ರಶ್ನೆಗೆ ಉತ್ತರಿಸುವ ಗೊಡವೆಗೆ ಹೊಗದೆ,
"ಸರಿ, ನಕ್ಷತ್ರ ಅಂತಾರಲ್ಲ ಅವುಗಳಿಗೂ ಸ್ವಭಾವ ಗುಣ ಅಂತ ಇರುತ್ತದಂತೆ ಹೌದಾ ?" ಕೇಳಿದ.
"ಉದಾಹರಣೆಗೆ ಹುಬ್ಬಾ ನಕ್ಷತ್ರ ತೆಗೆದುಕೋ. ನಿಮ್ಮಜ್ಜ ಅದೇ ನಕ್ಷತ್ರ ಪ್ರಥಮ ಚರಣದಲ್ಲಿ ಹುಟ್ಟಿದ್ದರಂತೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಹೆಚ್ಚಾಗಿ ಜೀವನದಲ್ಲಿ ಒಂದು ಬಾರಿಯಾದರೂ ಮನೆ ಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ.

ಇನ್ನು ಮೂಲಾ ನಕ್ಷತ್ರ ಇದೆಯಲ್ಲ, ಪರಂಪರಾಗತವಾಗಿ ಕೆಟ್ಟ ನಕ್ಷತ್ರ ಎಂದು ಹೆಸರು ಪಡೆದಿದೆ. ಒಂದು ಪಾಲು ನಿಜ ಆದರೂ ಪೂರ್ಣ ಅಲ್ಲ. ಈ ನಕ್ಷತ್ರದಲ್ಲಿ ಯಾವುದೇ ಕೆಲಸ ಕೈಗೆತ್ತಿಕೊಂಡರೂ ಆ ಕೆಲಸ ಸಂಪೂರ್ಣ ರೂಪದಲ್ಲಿ ಯಶಸ್ವಿಯಾಗುತ್ತದೆ. ಆದರೆ ಮಂಗಳ ಗ್ರಹ ಈ ನಕ್ಷತ್ರದಲ್ಲಿದ್ದರೆ ಅಂದು ಅನಾಹುತಗಳೇ ಜಾಸ್ತಿ.

ಏಕೆಂದರೆ ಮಂಗಳನಿಗೆ ಸೌರಮಂಡಲದಲ್ಲಿ ಸೇನಾಧಿಪತಿಯ ಸ್ಧಾನ. ಸೇನಾಧಿಪತಿ ಎಂದರೆ ದ್ವೇಷ, ಸೋಲು ಸಹಿಸದ, ಹಿಂಸಾಪ್ರಿಯ, ಛಲ ಈ ಸ್ವಭಾವಗಳನ್ನು ಪ್ರತಿನಿಧಿಸುತ್ತಾನೆ. ಮತ್ತು ಮೂಲಾ ನಕ್ಷತ್ರ ಕೈಗೊಳ್ಳುವ ಕೆಲಸಕ್ಕೆ ಪ್ರಾರಂಭಿಕ ಉತ್ಸಾಹವನ್ನು ನೀಡುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದೆ. ಬೇಕಿದ್ದರೆ ಒಂದು ಸಾರಿ ಧರ್ಮಾರ್ಥ ಪ್ರಕಾಶ ಎನ್ನುವ ಗ್ರಂಥವನ್ನು ಓದುವ ಪ್ರಯತ್ನ ಮಾಡು. ಇಲ್ಲಾಂದ್ರೆ ವಿಷ್ಣು ಶಾಸ್ತ್ರಿ ಒಬ್ಬರಿದ್ದಾರೆ. ಅವರ ಜೊತೆ ವಿಷಯದ ಬಗ್ಗೆ ಚರ್ಚಿಸು ಎಂದು ಸುಬ್ಬಯ್ಯ ಶಾಸ್ತ್ರಿಗಳು ಹೇಳಿ ತಮ್ಮ ಅಧ್ಯಯನದತ್ತ ಗಮನ ಹರಿಸಿದರು.

ಅದ್ಯಾವನಿಗೆ ಬೇಕು ಧರ್ಮಾರ್ಥ ಪ್ರಕಾಶ ಓದುವುದು? ಸಂಸ್ಕೃತವನ್ನು ಓದುವುದು ಎಂದರೆ ಆಗದ ಮಾತು. ನಾಲಿಗೆ ಶಬ್ದವೇ ಅತ್ತಿತ್ತ ಆಗಿ ಚಿಕ್ಕವನಿದ್ದಾಗ ಅಪ್ಪನ ಕೈಯಿಂದ ಏಟು ತಿಂದದ್ದು ನೆನಪಿಗೆ ಬಂದಿತು. ಅಂದಿನಿಂದ ಅವನು ಸಂಸ್ಕೃತ ಭಾಷಾ ದ್ವೇಷಿ. ಬೇಕಿದ್ದರೆ ವಿಷ್ಣು ಶಾಸ್ತ್ರಿಗಳ ಹತ್ತಿರ ಹೋಗಿ ಬಂದರಾಯಿತು ಎಂದುಕೊಂಡು ಸುಮ್ಮನಾದ. ಆದರೆ ಮನದ ಮೂಲೆಯಲ್ಲಿ ಕುಳಿತ ಸಂಶಯದ ಹುಳ ಇನ್ನು ಗುಂಯ್‌ಗುಡುತ್ತಲೇ ಇತ್ತು.
(ಮುಂದುವರೆಯುವುದು)

Share this Story:

Follow Webdunia kannada