ವಕ್ರತೆಯಿರುವಲ್ಲಿ ಋಜುವಿಲ್ಲ
ಋಜುವಿರುವಲ್ಲಿ ವಕ್ರತೆಯಿಲ್ಲ
ವಕ್ರತೆ ಋಜುಗಳನು ಒಂದೆಡೆ ನಾವು ಕಾಣೆವಲ್ಲ
ಆದರೆ ನಾವಿಬ್ಬರೂ ಒಂದಾಗಿ ಬದುಕುತಿಹೆವಲ್ಲ
ಗುಲಾಬಿಯಿರುವಲ್ಲಿ ಮುಳ್ಳು
ತಾವರೆಯಿರುವಲ್ಲಿ ಕೆಸರು
ಪರಿಮಳದ ಕಸ್ತೂರಿಯಲಿ ನೀನು
ನೀನದೆಲ್ಲಿಯೊ ಅಲ್ಲಿ ನಾನು
ಅಲ್ಲ ನೀನೆನಗೆ ಜೀವನ ವಿರೋಧಿ
ಬಲ್ಲೆ ನೀನೆನ್ನ ಬದುಕಿನ ಸೌಭಾಗ್ಯನಿಧಿ
ಅಲ್ಲ ನೀನೆನ್ನ ಬಾಳ ಮೊಸರಿನ ಕಲ್ಲು
ನಿಜಕು ನೀನೇ ಎನ್ನ ಯಶಸ್ಸಿನ ಮೈಲಿಗಲ್ಲು
ನೀನಿದ್ದರೇನೇ ನನ್ನ ಬದುಕಿಗೆ ಅರ್ಧ
ನೀನಿಲ್ಲದಿರೆ ನನ್ನ ಬಾಳು ವ್ಯರ್ಥ
ಇಲ್ಲ ನಮ್ಮೊಳಗೆ ಮೇಲು ಕೀಳೆಂಬ ಭಾವ
ತಾರತಮ್ಯವು ಬರಲು ಪ್ರೀತಿ ಸ್ನೇಹಕ್ಕೆ ಅಭಾವ
ಕಪ್ಪು ಬಿಳಿ ರಾತ್ರಿ ಹಗಲು
ಕಷ್ಟಸುಖ ನೋವು ನಲಿವು
ಇದ್ದೇ ಇವೆಯಲ್ಲ ಈಜಗದಲ್ಲಿ
ಅಂದು ಇಂದು ಮುಂದು ಎಂದೆಂದು
ಅದರಂತೆ ನೀನು ನಾನು
ಬೆರೆತಾಗ ನಾನು ನೀನು
ಆಗೋಣ ಯುಗಾದಿಯ ಬೇವು ಬೆಲ್ಲ
ನಮಗಿನ್ನು ಸಾಟಿ ಬೇರೆಯಿಲ್ಲ.
- ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ