ಆಗೋಣ ನಾವೆಲ್ಲ ಒಂದು
ಐಕ್ಯದಿಂದಲಿ ಸಾಗೋಣ ಮುಂದು
ಮುಂದು ಮುಂದಕ್ಕೆ ಸಾಗೋಣ ಎಂದೆಂದು
ಭಾಷೆ ಬಣ್ಣ ಬೇರೆ ಬೇರೆ ಆದರೇನು
ನಮ್ಮ ಚಿಂತನೆ ಒಂದೆ ಅಲ್ಲವೇನು?
ಜಾತಿ ಮತ ಬೇರೆ ಬೇರೆ ಇದ್ದರೇನು
ನಮ್ಮ ಸಂಸ್ಕೃತಿ ಒಂದೆ ಅಲ್ಲವೇನು
ರಾಜ್ಯಗಳು ಹಲವು ಇದ್ದರೇನು
ಭರತ ಭೂಮಿ ಅಖಂಡವಲ್ಲವೇನು
ಹಲವು ಪಕ್ಷ ಪಂಗಡವಿದ್ದರೇನು
ನಮ್ಮ ಧ್ಯೇಯ ಒಂದೆ ಆಗಬೇಡವೇನು
ನಮ್ಮ ಹೃದಯವು ಅದುವೇ ಭಾರತ
ನಮ್ಮ ಎಲುಬು ಮಾಂಸಗಳೆಲ್ಲ ಭಾರತ
ನಮ್ಮ ರಕ್ತದ ಹನಿಹನಿಯು ಭಾರತ
ನಮ್ಮ ಜೀವದ ಉಸಿರದು ಭಾರತ
ಹಿಂದು ಮುಸ್ಲಿಂ ಕ್ರೈಸ್ತ ಸಿಕ್ಖ
ಎಂಬ ಜಾತಿ ಧರ್ಮದ ಭೇದ ಭಾವ ಬೇಡ
ಮಾನವ ಕುಲವು ಒಂದೆ ಎಂಬ
ಭಾವನೆ ಇರಲಿ ಹೃದಯ ತುಂಬ
ಅನೇಕತೆಯಲಿ ಇಹುದು ನೋಡಿ ಐಕ್ಯ
ಶಾಂತಿ ನೆಮ್ಮದಿ ಪಡೆವುದೆ ಮುಖ್ಯ
ನಾವು ಒಂದಾಗಿ ಬಾಳಬೇಕು ನಿತ್ಯ
ನಮ್ಮ ನಡತೆಯಲಿ ಇರಲಿ ಧರ್ಮ ಸತ್ಯ
ಆಸೇತು ಹಿಮಾಚಲವೊಂದು
ಅತಿಪಾವನ ವೀ ನಮ್ಮ ನಾಡು
ಸತ್ಯ ಸದ್ಧರ್ಮದಾ ನೆಲೆವೀಡು
ವಿಶ್ವಶಾಂತಿಯ ಸಾರುವ ನಾಡು
ಲೋಕನಾಯಕರುದಿಸಿದ ನಾಡು
ಅಧ್ಯಾತ್ಮ ತತ್ವದ ಬೀಡು
ಧರ್ಮ ಪುರುಷರು ಬಾಳಿದಾ ನಾಡು
ಕವಿ ಪುಂಗವರುದಿಸಿದ ಬೀಡು
ಕಷ್ಟನಷ್ಟವು ದುಃಖವು ಬಂದರೆ
ಐಕ್ಯವಿರಲು ನಮಗಿಲ್ಲವು ತೊಂದರೆ
ನಾವೆಲ್ಲರೊಂದುಗೂಡಿ ಬಾಳುವಾ
ತಾಯ್ನಾಡ ಹಿರಿಮೆಯನ್ನು ಸಾರುವಾ
ದೇಶದುನ್ನತಿಯ ನಾಂದಿಯನ್ನು ಹಾಡುವಾ
ಐಕ್ಯದ ಕಹಳೆಯನ್ನು ಮೊಳಗುವಾ
ಬಾಳೋಣ ಒಂದಾಗಿ ಮುಂದು
ಭಾರತಾಂಬೆಯ ಮಕ್ಕಳು ಎಂದು
ಆಗೋಣ ನಾವೆಲ್ಲ ಒಂದು
ಒಂದಾಗಿ ಸಾಗೋಣ ಮುಂದು
- ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ