ಜಟ್ಟ ಎಲ್ಲ ಓಕೆ ಆದ್ರೆ ಸ್ವಲ್ಪ ಮಾತ್ರ ನಾಟ್ ಓಕೆ !
, ಸೋಮವಾರ, 14 ಅಕ್ಟೋಬರ್ 2013 (18:51 IST)
ನವಿಲಾದವರು ನಿರ್ದೇಶಕ ಗಿರಿರಾಜ್ ಅವರ ಪ್ರಥಮ ಪ್ರಯತ್ನ. ಭಯೋತ್ಪಾದನೆ, ಜನರ ಸಣ್ಣತನ ಮುಂತಾದವುಗಳನ್ನು ಒಳಗೊಂಡಿದ್ದ ಆ ಚಿತ್ರ ಮಾಧ್ಯಮಗಳಿಂದ ಉತ್ತಮ ವಿಮರ್ಶೆ, ಪ್ರತಿಕ್ರಿಯೆ ಪಡೆದಿತ್ತು. ಅವರ ಮತ್ತೊಂದು ಪ್ರಯತ್ನವೇ ಜಟ್ಟ . ಅದೂ ಸಹ ನವಿಲಾದವರು ದಾರಿಯಲ್ಲೇ ನಡೆಯುವ ಚಿತ್ರ . ಒಂದು ದಟ್ಟ ಕಾಡಿನ ನಡುವೆ ಕಾಡು ಮನುಷ್ಯನಂತಹ ವ್ಯಕ್ತಿ ಮತ್ತು ಒಬ್ಬಳು ಕ್ರಾಂತಿಕಾರಿ ಮನೋಭಾವದ ಶೋಷಿತ ಹೆಣ್ಣು, ಮತ್ತು ಸುಖಕ್ಕಾಗಿ ಹಂಬಲಿಸುವ ಗೃಹಿಣಿ ಇವುಗಳ ನಡುವೆ ನಡೆಯುವ ಕಥೆ. ಅಂತಿಮವಾಗಿ ನಾಯಕ ತಾನೇ ನಾಗರಿಕನಾಗುವುದೇ ಕಥೆಯ ಹಂದರ. ಆದರೆ ಇದು ಎಲ್ಲ ಪ್ರೇಕ್ಷಕರಿಗೆ ಅರ್ಥವಾಗುವಂತೆ ಇಲ್ಲ. ಅದೇ ಇದರ ಡಿಸ್ ಅಡ್ವಾ೦ಟೇಜ್ . ಇಲ್ಲಿ ಎಲ್ಲವನ್ನೂ ಒಂದೆ ಕಡೆ ಚರ್ಚಿಸಲು ವಾದ ಮಾಡಲು ನಿರ್ಧರಿಸಿದ್ದಾರೆ. ಹಾಗಾಗಿಯೇ ಚಿತ್ರ ಒಂದು ಹಿಡಿತಕ್ಕೆ ಸಿಗುವುದಿಲ್ಲ.
ಮಧ್ಯಂತರದ ನಂತರ ಚಿತ್ರ ಯಾರ ಹಿಡಿತಕ್ಕೂ ಸಿಗದೇ ಸಾಗುತ್ತದೆ. ಸಂಬಂಧಗಳ ಸಂಕೀರ್ಣತೆ, ಸೂಕ್ಷ್ಮತೆಗಳನ್ನು ಹೇಳಲಿಕ್ಕೆ ಹೊರಟಿರುವ ನಿರ್ದೇಶಕರು ಅದನ್ನು ಸಂಪೂರ್ಣವಾಗಿಸುವಲ್ಲಿ ಸ್ವಲ್ಪ ಹಳಿ ತಪ್ಪಿದಂತೆ ಭಾಸವಾಗುತ್ತದೆ. ಇಡೀ ಕಥೆ ಕಾಡಿನಲ್ಲಿ ನಡೆಯುತ್ತದೆ. ರಮ್ಯ ಹಸಿರು ನೋಡುವುದಕ್ಕೆ ಖುಷಿ ಕೊಡುತ್ತದೆ.ಛಾಯಾಗ್ರಾಹಕ ಸೂರ್ಯ ಚಂದ್ರ ಇಡೀ ಚಿತ್ರವನ್ನು ಅಂದ ಹೆಚ್ಚಿಸಿದ್ದಾರೆ .ಕಾಡು, ಅಲ್ಲಿನ ಜನರು, ಅವರ ಜೀವನ ಶೈಲಿ, ಮುಗ್ಧತೆ ಮುಂತಾದವುಗಳಿಗೆ ನಿರ್ದೇಶಕರು ಆದ್ಯತೆ ನೀಡಿದ್ದಾರೆ. ಪಾತ್ರವರ್ಗವನ್ನು ತುಂಬಾ ಜಾಗರೂಕತೆಯಿಂದ ಆಯ್ಕೆಮಾಡಿಕೊಂಡಿರುವುದರಿಂದ ಚಿತ್ರದ ಪಾತ್ರಗಳು ನ್ಯಾಯಪಡೆದಿವೆ. ಆಶ್ಲೆ ಅಭಿಲಾಶ್ ಸಂಗೀತ ಕೂಡ ಮೋಸ ಮಾಡುವುದಿಲ್ಲ. ಚಿತ್ರ ಕಮರ್ಶಿಯಲ್ಲಾ ಅಥವಾ ಕಲಾತ್ಮಕವಾ ಎಂದು ತಿಳಿಯದ ಗೊಂದಲ ಕಾಡುವುದು ನಿಶ್ಚಿತ !