ಬಾಲಿವುಡ್ ಜನಪ್ರಿಯ ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ಮತ್ತಿತರರನ್ನು ಬೆದರಿಸಿದ್ದ ಮಾಫಿಯಾ ಡಾನ್ ರವಿ ಪೂಜಾರಿ ಕಣ್ಣು ಈಗ ಖ್ಯಾತ ನಿರ್ದೇಶಕರಾದ ಮಹೇಶ್ ಭಟ್ ಮತ್ತು ಫರ್ಹಾ ಖಾನ್ ಮೇಲಿದೆ. ಸೋಮವಾರ ಖಾರ್ನಲ್ಲಿರುವ ಮಹೇಶ್ ಭಟ್ ಕಚೇರಿ ಬಳಿಯಿಂದ ಪೊಲೀಸರು 13 ರವಿ ಪೂಜಾರಿ ಭಂಟರನ್ನು ಬಂಧಿಸಿದ್ದು, ಅವರು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾರೆ.
ಮಹೇಶ್ ಭಟ್ ಮತ್ತು ಫರ್ಹಾ ಖಾನ್ ಮನೆ ಮತ್ತು ಕಚೇರಿ ಮೇಲೆ ರವಿ ಪೂಜಾರಿ ಗ್ಯಾಂಗಿನವರು ಸುಮಾರು ಎರಡು ತಿಂಗಳಿಂದ ಕಣ್ಣಿಟ್ಟಿದ್ದರು. ಜತೆಗೆ ಶಾರೂಕ್ ಖಾನ್ ಪಾಲುದಾರಿಕೆಯಲ್ಲಿರುವ ರೆಡ್ ಚಿಲ್ಲೀಸ್ ಸಿನೇಮಾ ನಿರ್ಮಾಣ ಕಂಪೆನಿಯ ಕಚೇರಿಯ ಮಾಹಿತಿ ರವಾನಿಸಲು ರವಿ ಪೂಜಾರಿ ಸೂಚಿಸಿದ್ದ.
ಭಟ್ ಹತ್ಯೆಗೆ ಸ್ಕೆಚ್
ಸಿನೆಮಾದವರನ್ನು ಹೆದರಿಸಿ ಹಫ್ತಾ ವಸೂಲು ಮಾಡುವ ಸಲುವಾಗಿ ಖ್ಯಾತರೊಬ್ಬರನ್ನು ಸಾಯಿಸುವುದು ರವಿ ಪೂಜಾರಿಯ ಉದ್ದೇಶ. ಇದಕ್ಕಾಗಿ ಅವನು ಮಹೇಶ್ ಭಟ್ರನ್ನು ಆರಿಸಿಕೊಂಡಿದ್ದ. ಮಹೇಶ್ ಭಟ್ ಸಿಗದಿದ್ದರೆ ಅವರ ಅಣ್ಣ ಮುಕೇಶ್ ಭಟ್ ಅಥವ ಮಗ ರಾಹುಲ್ ಭಟ್ ಆದರೂ ಆಗಬಹುದು. ಅವರ ಮೇಲೆ ಗುಂಡು ಹಾರಿಸಿದರೆ ಸುಲಭವಾಗಿ ಪ್ರಚಾರ ಸಿಗುತ್ತದೆ ಮತ್ತು ಬಾಲಿವುಡ್ನವರ ಮನಸ್ಸಿನಲ್ಲಿ ಭಯ ಬೇರೂರುತ್ತದೆ ಎಂದು ಸೂಚಿಸಿದ್ದ.
ಪೂಜಾರಿ ಭಂಟರು ಆರು ದಿನಗಳಲ್ಲಿ ನಾಲ್ಕು ಸಲ ಮಹೇಶ್ ಭಟ್ ಹತ್ಯೆಗೆ ಯತ್ನಿಸಿದ್ದಾರೆ. ನ.10, ನ. 14 ಮತ್ತು ನ.17ರ ನಡುವೆ ಅವರು ಹತ್ಯೆಗೆ ನಡೆಸಿದ ಕೆಲವು ಪ್ರಯತ್ನ ವಿಫಲಗೊಂಡಿದೆ. ಹೀಗಾಗಿ ಅವರು ಮಹೇಶ್ ಭಟ್ರನ್ನು ಬಿಟ್ಟು ಫರ್ಹಾ ಖಾನ್ರನ್ನು ಹಿಂಬಾಲಿಸಲು ತೊಡಗಿದ್ದರು.
ಮುಂಬ್ರಾದಲ್ಲಿ ತರಬೇತಿ
ರವಿ ಪೂಜಾರಿ ತನ್ನ ಭಂಟರಿಗೆ ಮುಂಬಯಿ ಸಮೀಪದ ಮುಂಬ್ರಾದ ಕಾಡಿನಲ್ಲೇ ಗುಂಡು ಹಾರಿಸುವ ತರಬೇತಿ ಕೊಡಲು ಏರ್ಪಾಡು ಮಾಡಿದ್ದ. ಮಹೇಶ್ ಭಟ್ ಮೇಲೆ ರವಿ ಪೂಜಾರಿಗೆ ವೈಯಕ್ತಿಕ ದ್ವೇಷವಿಲ್ಲ. ಕೇವಲ ಪ್ರಚಾರ ಪಡೆದು ಉಳಿದವರಿಂದ ಸುಲಭವಾಗಿ ಹಫ್ತಾ ವಸೂಲು ಮಾಡಲು ಅವರನ್ನು ಸಾಯಿಸಲುದ್ದೇಶಿಸಿದ್ದಾನೆ.
ಈ ಹಿಂದೆ ಶಾರೂಕ್ ಖಾನ್, ಸಲ್ಮಾನ್ ಖಾನ್, ಸೋನು ಸೂದ್,ಬೊಮನ್ ಇರಾನಿ , ನಿರ್ಮಾಪಕರಾದ ಮೊರಾನಿ ಸಹೋದರರು, ಫರ್ಹಾನ್ ಅಖ್ತರ್, ರಿತೇಶ್ ಸಿಧ್ವಾನಿ ಮತ್ತಿತರರಿಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿತ್ತು.