ಧನುಷ್ ಹಾಡಿದ್ದಾರೆ ಕನ್ನಡ ಚಿತ್ರಕ್ಕೆ ಅದೂ ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ಚಿತ್ರ ವಜ್ರಕಾಯ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ನಟ ಧನುಷ್ ಅವರು ಹಾಡುತ್ತಿದ್ದಾರೆ ಎಂದು ಹೇಳಿದ್ದೆವು,ಅವರು ಹರ್ಷ ನಿರ್ದೇಶನದ ಚಿತ್ರದಲ್ಲಿ ಹಾಡಿದ್ದು ಆಯ್ತು. ಈ ತಮಿಳು ಸ್ಟಾರ್ ನಟನ ಹಾಡಿಗೆ ಸಂಭಾವನೆ ನೀಡಿದ್ದು 4 ಲಕ್ಷ ಬೆಲೆ ಬಾಳುವ ರಿಸ್ಟ್ ವಾಚ್. ಇದು ಕನ್ನಡದಲ್ಲಿ ಅವರು ಹಾಡಿದ ಮೊದಲ ಹಾಡಾಗಿದ್ದು, ಈ ಮೂಲಕ ಕನ್ನಡ ಚಿತ್ರಗಳಲ್ಲಿ ಹಾಡುವ ಸಾಧ್ಯತೆ ಹೇರಳವಾಗಿದೆ.
ಈ ಚಿತ್ರದ ನಿರ್ಮಾಪಕರಾಗಿರುವ ಸಿ ಆರ್ ಮನೋಹರ್ ಅವರಿಗೆ ಧನುಷ್ ಗೆ ಎಷ್ಟು ಸಂಭಾವನೆ ಕೊಡ ಬೇಕು ಹಾಗೂ ಹೇಗೆ ಅವರ ಸರ್ವೀಸ್ ಗೆ ಕಾಣಿಕೆ ನೀಡ ಬೇಕು ಎಂದು ತಿಳಿಯದೆ ಅಂತಿಮವಾಗಿ ರಿಸ್ಟ್ ವಾಚ್ ನೀಡುವುದರ ಮೂಲಕ ಈ ಹಾಡಿನ ಸಂಭಾವನೆ ಚುಕ್ತಾ ಮಾಡಿದ್ದಾರೆ.
ನಿರ್ದೇಶಕ ಹರ್ಷ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಹಾಡಲೆಂದು ಕೇಳಿದಾಗ ಡಾ. ರಾಜ್ ಕುಮಾರ್ ಅವರ ಕುಟುಂಬ ಬಗ್ಗೆ ತುಂಬಾ ಗೌರವ ಇರುವ ಧನುಷ್ ಶಿವಣ್ಣ ಚಿತ್ರದಲ್ಲಿ ಹಾಡಲು ಸಮ್ಮತಿಸಿದರಂತೆ. ಈಗ ಧನುಷ್ ಮತ್ತು ಡಾ. ಶಿವರಾಜ್ ಕುಮಾರ್ ಉತ್ತಮ ಸ್ನೇಹಿತರಾಗಿದ್ದಾರೆ.
ನೋ ಪ್ರಾಬ್ಲಂ ನೋ ಪ್ರಾಬ್ಲಂ ಎನ್ನುವುದು ಹಾಡಿನ ಮೊದಲ ಸಾಲು.ಇದನ್ನು ಮೋಹನ್ ರಚಿಸಿದ್ದಾರೆ. ಈ ಹಾಡನ್ನು ಚೆನ್ನೈನ ಧನುಷ್ ಮನೆಯಲ್ಲಿ ಇರುವ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ. ಕೊಲವೆರಿ ಡಿ ಯಂತೆ ಈ ಹಾಡು ಧನುಷ್ ಹವಾವನ್ನು ಕನ್ನಡದಲ್ಲಿ ಸೃಷ್ಟಿ ಮಾಡುತ್ತದೆಯೇ ? ಸಮಯ ಈ ಪ್ರಶ್ನೆಗೆ ಉತ್ತರಿಸುತ್ತದೆ!