'ಎತಿರ್ ನೀಚಲ್' ಚಿತ್ರದಲ್ಲಿ ಖಳನಟನಾಗಿ ಕಾಣಿಸಿ ಎಲ್ಲರ ಮನ ಗೆದ್ದಿದ್ದ ಶರತ್ ಲೋಹಿತಾಶ್ವ ಅವರಿಗೆ ತಮಿಳಿನಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಧನುಷ್ ನಿರ್ಮಾಣದ 'ಎತಿರ್ ನೀಚಲ್' ಚಿತ್ರದಲ್ಲಿ ಶಿವಕಾರ್ತಿಕೇಯನ್ ಹೀರೋ ಆಗಿದ್ದಾರೆ. ಅದರಲ್ಲಿ ಕನ್ನಡ ಶರತ್ ಲೋಹಿತಾಶ್ವ ವಿಲನ್. ಧನುಷ್ ಆ ಚಿತ್ರದ ಹಾಡೊಂದರಲ್ಲಿ ಮಾತ್ರ ಬಂದುಹೋಗುತ್ತಾರೆ. ಆದರೆ, ಶರತ್ ಲೋಹಿತಾಶ್ವ ಆ ಚಿತ್ರದ ಹೈಲೈಟ್
'ಎತಿರ್ ನೀಚಲ್' ಚಿತ್ರದ ನಟನೆ ನೋಡಿದ ಅಲ್ಲಿನ ಒಂದಷ್ಟು ತಮಿಳು ನಿರ್ದೇಶಕರು ಶರತ್ ರನ್ನು ಸಂಪರ್ಕಿಸಿದ್ದಾರೆ. . ಆ ಚಿತ್ರ ಬಿಡುಗಡೆಯಾಗಿ ಶತದಿನೋತ್ಸವ ಆಚರಿಸಿದೆ. ಅದಾದ ಬಳಿಕ ವಿಶಾಲ್ ನಿರ್ಮಾಣದ 'ಪಾಂಡಿಯ ನಾಡು' ಚಿತ್ರದಲ್ಲಿ ಶರತ್ ಪ್ರಧಾನ ಖಳ ನಟರಾಗಿದ್ದಾರೆ. 'ಆ ದಿನಗಳು' ಚಿತ್ರ ನೋಡಿದ ಆ ಚಿತ್ರದ ನಿರ್ದೇಶಕರು ಒಳ್ಳೆಯ ಪಾತ್ರ ಕೊಟ್ಟಿದ್ದಾರಂತೆ. ತಮಿಳು ಚಿತ್ರಗಳು ಹುಡುಕಿ ಬರುತ್ತಿವೆಯಂತೆ. ಸದ್ಯಕ್ಕೆ 'ಒಗ್ಗರಣೆ' ಚಿತ್ರದ ನಾಯಕಿ ಸ್ನೇಹ ತಮಿಳಿನಲ್ಲೊಂದು ಚಿತ್ರ ನಿರ್ಮಿಸುತ್ತಿದ್ದು, ಆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅದರೊಂದಿಗೆ ಮತ್ತೊಂದು ಹೊಸ ಚಿತ್ರವೂ ಇದೆ.
ಈ ನಡುವೆ ಕೆ.ಎಸ್.ರವಿಕುಮಾರ್ ರಜನಿಕಾಂತ್ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರದಲ್ಲೂ ಒಂದು ಪಾತ್ರ ಇದೆ ಎಂಬುದಾಗಿ ನಿರ್ದೇಶಕರು ಹೇಳಿದ್ದಾರೆ. ತಮಿಳು ಚಿತ್ರದಲ್ಲಿ ಇವರ ಕಂಠ ಬಳಕೆ ಆಗಿಲ್ಲವಂತೆ. ಕದಿರ್ ಎನ್ನುವ ಕಂಠ ದಾನ ಕಲಾವಿದ ಇವರ ಪಾತ್ರಕ್ಕೆ ಕಂಠದ ಮೂಲಕ ಜೀವ ತುಂಬಿದ್ದಾರೆ. ಒಟ್ಟಿನಲ್ಲಿ ನಮ್ಮ ಮನೆಯ ಅಂಗಳದ ಈ ಪ್ರತಿಭೆ ಪಕ್ಕದ ಮನೆಯಲ್ಲೂ ತನ್ನ ಪಾಂಡಿತ್ಯ ಪ್ರದರ್ಶಿಸಲು ಹೊರಟಿದೆ.. ಅವರ ಸಿನಿ ಪಯಣ ಯಶಸ್ವಿ ಆಗಲಿ