ಅನಗತ್ಯವಾದ ವಿಷಯಗಳನ್ನು ಚರ್ಚಿಸುತ್ತಾ ದೊಡ್ಡ ವಿವಾದವನ್ನಾಗಿ ಮಾಡದಿರಿ ಎಂದು ನಟ ನಿರ್ದೇಶಕ ಸುದೀಪ್ ಮನವಿ ಮಾಡಿಕೊಂಡಿದ್ದಾರೆ. ಕಲಾವಿದರ ಬಾಂಧವ್ಯ ತುಂಬಾ ಚೆನ್ನಾಗಿದೆ, ಆದರೆ ಸುಖಾಸುಮ್ಮನೆ ಇಲ್ಲದ್ದು ಸಲ್ಲದ್ದು ಚರ್ಚಿಸಿ ವಾತಾವರಣ ಹಾಳು ಮಾಡದಿರಿ ಎಂದು ಕೇಳಿಕೊಂಡಿದ್ದಾರೆ ಕಿಚ್ಚ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕಾನೇಕ ಕಾಮೆಂಟ್ಗಳು ಹರಡಿದ್ದು, ಕಲಾವಿದರು ಅವರ ಚರ್ಚೆಯ ವಿಷಯವಾಗಿದ್ದರು. ಅದರಲ್ಲಿ ಅನೇಕ ಮಂದಿ ಸ್ಟಾರ್ ಕಲಾವಿದ ಅಭಿಮಾನಿಗಳಿದ್ದರು. ಫ್ಯಾನ್ಸ್ ಇರುವ ಕಡೆ ಎಂತಹ ವಾತಾವರಣ ಇರುತ್ತದೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ. ಯಾರು ಮುಖ್ಯ ಯಾರು ಅಮುಖ್ಯ. ಯಾವ ನಟ ದೊಡ್ಡವ ಮತ್ಯಾರು ಅಲ್ಲ ಹೀಗೆ ಸಣ್ಣ ಪುಟ್ಟ ಸಂಗತಿಗಳು ಬಿರುಸಾಗಿ ಚರ್ಚೆಗೆ ಕಾರಣವಾಗುತ್ತಿದ್ದು ಅದರಿಂದ ಫ್ಯಾನ್ಗಳು ಮತ್ತಷ್ಟು ತಮ್ಮ ಪ್ರೀತಿಯ ಕಲಾವಿದರನ್ನು ಹಾಡಿ ಹೊಗಳಿ ಮತ್ತೊಬ್ಬರನ್ನು ಕೆಳಗಿಳಿಸುವತ್ತ ಆದ್ಯತೆ ನೀಡುತ್ತಿದ್ದಾರೆ.
ಈ ಸಂಗತಿಯ ಬಗ್ಗೆ ಟ್ವೀಟ್ ಮಾಡಿದ ಸುದೀಪ್ ಅನಗತ್ಯ ಜಗಳಗಳ ಬಗ್ಗೆ ಟ್ವೀಟ್ ಮಾಡುತ್ತಾ ಕೂರದಿರಿ. ಇದಕ್ಕೊಂದು ಅಂತ್ಯ ಕೊಡಿ ಇದು ನನ್ನ ಬೇಡಿಕೆ ಎಂದು ಹೇಳಿದ್ದಾರೆ. ನಾವೆಲ್ಲಾ ಕಲಾವಿದರು ಒಬ್ಬರಿಗೊಬ್ಬರು ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದು ಈ ಸಮಯದಲ್ಲಿ ತಿಳಿಸಿದ್ದಾರೆ.