ಸ್ಯಾಂಡಲ್ ವುಡ್ ಅಂಗಳದಲ್ಲಿ ಸೆಟ್ಟೇರಿದಾಗಿನಿಂದ ಹೊಸ ಭರವಸೆ ಮೂಡಿಸಿದ ಸಿನಿಮಾ ಸಿಗರೇಟ್. ತನ್ನ ಹೆಸರಿನಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದ ಈ ಸಿನಿಮಾ ಇದೀಗ ರಿಲೀಸ್ಗೆ ರೆಡಿಯಾಗಿದೆ. ಅದರಂತೆ ಚಿತ್ರತಂಡ ತಾವು ಪ್ರೇಕ್ಷಕರೆದುರಿಗೆ ಬರುವ ದಿನಾಂಕವನ್ನು ಕೂಡ ತಿಳಿಸಿದೆ.
ಅಂದ್ಹಾಗೆ ಆರೋಗ್ಯಕ್ಕೆ ಹಾನಿಕಾರಕವಾದ ವಿಷಯಗಳನ್ನು ಒಟ್ಟುಗೂಡಿಸಿ ಈ ಸಿನಿಮಾವನ್ನು ಮಾಡಲಾಗಿದೆಯಂತೆ. ಈ ಹಿಂದೆ ನೈಂಟಿ ಸಿನಿಮಾವನ್ನು ನಿರ್ದೇಶಿಸಿದ್ದ ಲಕ್ಕಿ ಶಂಕರ್ ಈ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದಾರೆ. ನೈಂಟಿ ಸಿನಿಮಾದಲ್ಲಿ ಶಂಕರ್ ಮದ್ಯಪಾನದ ದುಷ್ಪರಿಣಾಮಗಳನ್ನು ಹೇಳಿದ್ದರು. ಇದೀಗ ಸಿಗರೇಟ್ ಸಿನಿಮಾದ ಮೂಲಕ ಧೂಮಪಾನದ ಬಗ್ಗೆ ಹೇಳೋದಕ್ಕೆ ಹೊರಟಿದ್ದಾರೆ ಶಂಕರ್. ಇನ್ನು ಸಿನಿಮಾ ಸಿಗರೇಟ್ ಸೇದ್ಬೇಡಿ ಪ್ರೀತಿ ಮಾಡ್ಬೇಡಿ ಅನ್ನೋ ಟಾಗ್ ಲೈನ್ ಅನ್ನು ಹೊಂದಿದೆ.
ಸಿಗರೇಟ್ ಸಿನಿಮಾದಲ್ಲಿ ಮೈನಾ ಸಿನಿಮಾವನ್ನು ನಿರ್ದೇಶಿಸಿದ್ದ ನಾಗಶೇಖರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರೂಪಶ್ರೀ ಹಾಗೂ ರಕ್ಷಿತಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ನಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಮುಂದಿನ ತಿಂಗಳು ಅಂದರೆ ಡಿಸೆಂಬರ್ 11 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಸಿನಿಮಾವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತೋರಿಸುವ ಪ್ಲಾನ್ ನಲ್ಲಿದೆ ಸಿನಿಮಾ ತಂಡ.