Select Your Language

Notifications

webdunia
webdunia
webdunia
webdunia

ಹರೀಶ್ ರಾಜ್‌ಗೆ 'ಕರಿಯ' ಅಭಿನಯಶ್ರೀ ಹೀರೋಯಿನ್

ಹರೀಶ್ ರಾಜ್‌ಗೆ 'ಕರಿಯ' ಅಭಿನಯಶ್ರೀ ಹೀರೋಯಿನ್
WD
ಪ್ರೇಮ್ ನಿರ್ದೇಶನದ ಮೊದಲ ಚಿತ್ರ 'ಕರಿಯ'ದಲ್ಲಿ ನಾಯಕಿಯಾಗಿದ್ದವರು ಅಭಿನಯಶ್ರೀ. ಮೊದಲ ಚಿತ್ರದಲ್ಲೇ ಗಮನ ಸೆಳೆದರೂ ಮತ್ತೆ ಆಕೆಯನ್ನು ಕನ್ನಡ ನಿರ್ಮಾಪಕರು ನಾಯಕಿ ಪಾತ್ರಕ್ಕಾಗಿ ಅರಸಿಕೊಂಡು ಹೋದವರಲ್ಲ. ಆದರೆ ಸುಮಾರು ಒಂಬತ್ತು ವರ್ಷಗಳ ನಂತರ ಮತ್ತೆ ನಾಯಕಿಯಾಗುವ ಅವಕಾಶ ಅಭಿನಯಶ್ರೀಗೆ ಸಿಕ್ಕಿದೆ.

ಗತಕಾಲದ ಕ್ಯಾಬರೆ ನರ್ತಕಿ ಅನುರಾಧಾ ಪುತ್ರಿ ಅಭಿನಯಶ್ರೀ 'ಮಾತಾಡು ಸಾಕು ಮೌನ ಬಿಸಾಕು..' ಎಂದು ಕನ್ನಡದಲ್ಲಿ ಜನಪ್ರಿಯರಾದವರು. ನಂತರ ಆಕೆಯನ್ನು ಅಭಿಮಾನಿಗಳು ನೆನಪು ಮಾಡಿಕೊಂಡಿದ್ದರೆ, ಅದು 'ಆ ಅಂಟೆ.. ಆ ಅಂಟೆ ಅಮಲಾಪುರ..' ತೆಲುಗು ಹಾಡಿನಲ್ಲಿ. ಅಷ್ಟು ಹೊತ್ತಿಗೆ ನಾಯಕಿಯಾಗಿದ್ದ ಅಭಿನಯಶ್ರೀ ಐಟಂ ಹುಡುಗಿಯಾಗಿ ಹೋಗಿದ್ದರು.

ಈಗಲೂ ಅಷ್ಟೇ, ಹತ್ತಾರು ಚಿತ್ರಗಳು ಆಕೆಯ ಕೈಯಲ್ಲಿವೆ. ಆದರೆ ಯಾವುದರಲ್ಲೂ ನಾಯಕಿಯಲ್ಲ. ಯಾವುದೋ ಒಂದು ಹಾಡಿನಲ್ಲಿ ಹಸಿ ದೇಹವನ್ನು ಪ್ರದರ್ಶಿಸಿ ಹೋಗುವಷ್ಟಕ್ಕೆ ಸೀಮಿತ. ಕನ್ನಡದಲ್ಲೂ ಹೀಗೆ ಬಂದು ಹಾಗೆ ಹೋದ ಅವರ ಕೆಲವು ಚಿತ್ರಗಳಿವೆ.

ಹಾಗೆ ನೋಡಿದರೆ, ಅಭಿನಯಶ್ರೀ ನಾಯಕಿಯಾಗಿಯೇ ಮುಂದುವರಿಯಬೇಕು ಎಂದು ಆಸೆ ಪಟ್ಟವರೂ ಅಲ್ಲ. ಅದಕ್ಕೆ ತಕ್ಕಂತೆ ತಾಯಿ ಅನುರಾಧಾ. ಮಗಳನ್ನು ಹಣದಾಸೆಗೆ ಬಳಸುತ್ತಿದ್ದಾರೆ ಎಂಬ ಆರೋಪ ಸ್ವತಃ ತಾಯಿ ಮೇಲೆಯೇ ಬಂದಿತ್ತು.

ಬಿಡಿ, ಈಗ ಅದೇ ಅಭಿನಯಶ್ರೀ ಕನ್ನಡದಲ್ಲಿ ಮತ್ತೆ ನಾಯಕಿಯಾಗುತ್ತಿದ್ದಾರೆ. ಆ ಚಿತ್ರದ ಹೆಸರು 'ಮಧುಚಂದ್ರ'. ಕನ್ನಡದ ಇನ್ನೊಬ್ಬ ಸಂತ್ರಸ್ತ ನಾಯಕ ಹರೀಶ್ ರಾಜ್ ನಾಯಕ. ಇಲ್ಲಿ ಹರೀಶ್ ರಾಜ್‌ಗೆ ಇನ್ನೊಬ್ಬ ನಾಯಕಿಯಿದ್ದಾರೆ, ಬೆರಳೆಣಿಕೆಯ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತನು ರಾಯ್‌ಗೂ ಇಲ್ಲಿ ಪ್ರಮುಖ ಪಾತ್ರವಿದೆ.

ಸೋಮಶೇಖರ್ ಎಂಬುವವರು ನಿರ್ಮಿಸುತ್ತಿರುವ 'ಮಧುಚಂದ್ರ'ಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಗುರು. ನಿರ್ಮಾಪಕ-ನಿರ್ದೇಶಕ ಇಬ್ಬರೂ ಹೊಸಬರು. ಆದರೆ ಇಬ್ಬರೂ ಬಣ್ಣದ ಲೋಕದಲ್ಲಿ ಅಲ್ಲಲ್ಲಿ ಕೈಯಾಡಿಸಿರುವವರು.

ಈಗವರು ಮಾಡಲು ಹೊರಟಿರುವ 'ಮಧುಚಂದ್ರ' ಪಕ್ಕಾ ಲವ್ ಕಮ್ ಹಾರರ್ ಸಿನಿಮಾ. ಮದುವೆಯಾದ ಜೋಡಿ ಹನಿಮೂನ್‌ಗೆ ಹೋದಾಗ ನಡೆಯುವ ವಿಚಿತ್ರ ಘಟನೆಗಳೇ ಚಿತ್ರದ ಕಥೆ. ಶೃಂಗೇರಿಯಲ್ಲಿ ಚಿತ್ರೀಕರಣ ನಡೆಸುವ ಲೆಕ್ಕಾಚಾರ ರೆಡಿಯಾಗಿದೆ. ಹಾರರ್ ಚಿತ್ರವಾಗಿರುವುದರಿಂದ ಬಹುತೇಕ ರಾತ್ರಿಯೇ ಶೂಟಿಂಗ್.

ಇಲ್ಲಿ ಕಿಶೋರ್ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಎಲ್ಲವೂ ಸರಿಯಾದರೆ ಜೂನ್ ಮೊದಲ ವಾರದಲ್ಲಿ ಮುಹೂರ್ತ, ನಂತರ ಶೂಟಿಂಗ್ ಶುರು.

Share this Story:

Follow Webdunia kannada