ಮಾರ್ಚ್ 29ರಂದು ಬಿಡುಗಡೆಯಾಗಬೇಕಿದ್ದ 'ಅಂದರ್ ಬಾಹರ್' ಚಿತ್ರಕ್ಕೆ ಅದರ ನಿರ್ಮಾಪಕರಲ್ಲೊಬ್ಬರೇ ಅಡ್ಡಿಯಾಗಿದ್ದರು. ಆ ಸಮಸ್ಯೆಯೀಗ ನಿವಾರಣೆಯಾಗಿದೆ. ಚಿತ್ರ ಏಪ್ರಿಲ್ 4ರ ಗುರುವಾರ ರಾಜ್ಯದಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ!
ಗೊತ್ತೇ ಇದೆ, ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕ, ಪಾರ್ವತಿ ಮೆನನ್ ನಾಯಕಿ. ಫನೀಶ್ ರಮಾನಾಥಪುರ ನಿರ್ದೇಶನದ ಚಿತ್ರದಲ್ಲಿ ಶಿವಣ್ಣನ ಜತೆ ಅರುಂಧತಿ ನಾಗ್ ತಾಯಿಯಾಗಿ ನಟಿಸಿರುವುದು ವಿಶೇಷ. ಇದೇ ಮೊದಲ ಬಾರಿ ಜೈ ಹೋ ಖ್ಯಾತಿಯ ವಿಜಯ್ ಪ್ರಕಾಶ್ ಸಂಗೀತ ನಿರ್ದೇಶನಕ್ಕೆ ಕೈ ಹಾಕಿರುವುದು ಚಿತ್ರದ ಇನ್ನೊಂದು ವಿಶೇಷ. ಶೇಖರ್ ಚಂದ್ರು ಛಾಯಾಗ್ರಹಣವಿದೆ. ಶಶಿಕುಮಾರ್, ಸ್ಫೂರ್ತಿ ಸುರೇಶ್ ಮುಂತಾದವರೂ ಅಭಿನಯಿಸಿದ್ದಾರೆ.
' ಅಂದರ್ ಬಾಹರ್' ಚಿತ್ರವನ್ನು ನಿರ್ಮಿಸಿರುವುದು ರಜನೀಶ್, ಪ್ರಸಾದ್, ಅಂಬರೀಷ್, ಅವಿನಾಶ್, ಭಾಸ್ಕರ್ ಮತ್ತು ಶ್ರೀನಿವಾಸ್ ಎಂಬ ಆರು ಮಂದಿ ಸಮಾನ ಮನಸ್ಕರು. ಈ ಚಿತ್ರಕ್ಕೆ ತಾನೂ ನಿರ್ಮಾಪಕ, ಆದರೆ ನನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕೆಲ ದಿನಗಳ ಹಿಂದಷ್ಟೇ ಜಗದೀಶ್ ಎ.ಎಸ್. ಎಂಬವರು ಕ್ಯಾತೆ ತೆಗೆದಿದ್ದರು. ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಅನುಮತಿ ನೀಡಬಾರದು ಎಂದು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಕೂಡ ಬರೆದಿದ್ದರು.
ಅಷ್ಟಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಿರ್ಮಾಪಕರು ಸಮಸ್ಯೆ ಬಗೆಹರಿಸಿದ್ದಾರೆ. ಕೂತು ಮಾತುಕತೆ ನಡೆಸಿ, ಚಿತ್ರದಿಂದ ಅಧಿಕೃತವಾಗಿ ಜಗದೀಶ್ಗೆ ಗೇಟ್ಪಾಸ್ ನೀಡಿದ್ದಾರೆ. ಅಲ್ಲಿಗೆ ಬಿಡುಗಡೆಗಿದ್ದ ಅಡೆತಡೆ ನಿವಾರಣೆಯಾಗಿದೆ. ಚಿತ್ರ ಏಪ್ರಿಲ್ 4ರಂದೇ ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಈ ನಡುವೆ ಶಿವಣ್ಣನ ಇನ್ನೊಂದು ಹೊಸ ಪ್ರಾಜೆಕ್ಟ್ 'ಆರ್ಯನ್' ನಿರ್ದೇಶಕ ಡಿ.ರಾಜೇಂದ್ರ ಬಾಬು ಚೇತರಿಸಿಕೊಂಡಿರುವ ಸುದ್ದಿ ಬಂದಿದೆ. ಇದೇ ವಾರ ಸೆಟ್ಟೇರಬೇಕಿದ್ದ ಚಿತ್ರಕ್ಕೆ ನಿರ್ದೇಶಕರ ಹಠಾತ್ ಅನಾರೋಗ್ಯ ಅಡ್ಡಿಯಾಗಿತ್ತು. ಈಗಿನ ಲೆಕ್ಕಾಚಾರಗಳ ಪ್ರಕಾರ ಚಿತ್ರ ಏಪ್ರಿಲ್ 24ರಂದು ಆರಂಭವಾಗಲಿದೆ.