ಈಗ ಇನ್ನೊಬ್ಬರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಸಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್ ಒಕ್ಕುಂದಮಠ್ ಎಂಬುವವರು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಅವರು ಸೆನ್ಸಾರ್ ಮಂಡಳಿಗೂ ದೂರು ನೀಡುತ್ತಾರಂತೆ, ಫಲ ಕೊಡದೇ ಇದ್ದರೆ ಹೈಕೋರ್ಟ್ಗೂ ಹೋಗುತ್ತಾರಂತೆ.
ಏನಂತಾರೆ ನಾಗಣ್ಣ-ದರ್ಶನ್? ನಮ್ಮ ಸಿನಿಮಾ ಬಿಡುಗಡೆಯೇ ಆಗಿಲ್ಲ. ಅಷ್ಟರಲ್ಲೇ ಚಿತ್ರದಲ್ಲಿ ಆಕ್ಷೇಪಕಾರಿ ಅಂಶಗಳಿವೆ ಅನ್ನೋದು ಅವರಿಗೆ ಹೇಗೆ ಗೊತ್ತಾಯ್ತು? ಸುಖಾ ಸುಮ್ಮನೆ ಆರೋಪ ಮಾಡುವುದು ಬೇಡ. ನಾವು ಭಯ-ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಹಣ ಮಾಡುವ ಉದ್ದೇಶ ನಮ್ಮದಲ್ಲ. ಹಾಗಿದ್ದಿದ್ದರೆ ಯಾವುದೋ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದೆವು. ಮೊದಲು ಸಿನಿಮಾ ನೋಡಿ, ನಂತರ ಮಾತನಾಡಿ ಎಂದು ನಿರ್ದೇಶಕ ನಾಗಣ್ಣ, ನಾಯಕ ದರ್ಶನ್ ಸಂಗೊಳ್ಳಿ ರಾಯಣ್ಣ 'ವಿರೋಧಿ'ಗಳಿಗೆ ಕಿವಿ ಮಾತು ಹೇಳಿದ್ದಾರೆ.
ವಿರೋಧವೇನೋ ಸರಿ, ಯಾವ ಕಾರಣಕ್ಕಾಗಿ? ಸಿನಿಮಾದಲ್ಲಿ ಯಾವ ಆಕ್ಷೇಪಕಾರಿ ಅಂಶಗಳಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ರಾಯಣ್ಣನಿಗೆ ಮದುವೆಯಾಗಿರಲಿಲ್ಲ... ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನಿಗೆ ಮದುವೆ ಆಗಿರಲಿಲ್ಲ. ಆತ ವೀರ ಮರಣವನ್ನಪ್ಪುವವರೆಗೆ ಬ್ರಹ್ಮಚಾರಿಯಾಗಿಯೇ ಇದ್ದ. ಆದರೆ ಸಿನಿಮಾದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡಿರುವ ದರ್ಶನ್ಗೆ ನಿಖಿತಾರನ್ನು ಪತ್ನಿಯಂತೆ ಬಿಂಬಿಸಲಾಗಿದೆ. ಜತೆಗೆ ರಾಯಣ್ಣ ನರ್ತಿಸುತ್ತಿರುವುದು ಕೂಡ ಪೋಸ್ಟರುಗಳಲ್ಲಿ ಕಂಡು ಬಂದಿದೆ. ಇದು ಇತಿಹಾಸವನ್ನು ತಿರುಚಿರುವುದೇ ಹೊರತು ಮತ್ತಿನ್ನೇನಲ್ಲ.
ರಾಯಣ್ಣ ಕುದುರೆ ಓಡಿಸಿದವನೇ ಅಲ್ಲ... ಸಂಗೊಳ್ಳಿ ರಾಯಣ್ಣ ಯಾವತ್ತೂ ಕುದುರೆ ಓಡಿಸಿದವನಲ್ಲ. ಆದರೆ ಈ ಸಿನಿಮಾದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆಂದು 17 ಲಕ್ಷ ರೂಪಾಯಿಗಳನ್ನು ತೆತ್ತು ಬಿಳಿ ಕುದುರೆಯನ್ನು ತರಲಾಗಿತ್ತು. ರಾಯಣ್ಣ ನಿಜ ಜೀವನದಲ್ಲಿ ಎದೆ ಕವಚವನ್ನು ಹಾಕಿದವನೇ ಅಲ್ಲ. ಆದರೆ ಚಿತ್ರದಲ್ಲಿ ಅದನ್ನು ತೋರಿಸಲಾಗಿದೆ. ರಾಯಣ್ಣನ ಪಾತ್ರವನ್ನು ಇಲ್ಲಿ ಸಂಪೂರ್ಣವಾಗಿ ತಿರುಚಲಾಗಿದೆ. ಸತ್ಯಾಂಶಗಳನ್ನು ಮರೆ ಮಾಚಿ ವೈಭವೀಕರಿಸಲಾಗಿದೆ.
ಗೆರಿಲ್ಲಾ ಯುದ್ಧ ಮಾಡಿದ್ದ... ' ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ಪ್ರಕಾರ, ರಾಯಣ್ಣ ಬ್ರಿಟೀಷರ ವಿರುದ್ಧ ಬಹಿರಂಗ ಯುದ್ಧ ಸಾರುತ್ತಾನೆ, ಯುದ್ಧವನ್ನೂ ಮಾಡುತ್ತಾನೆ. ಆದರೆ ಇತಿಹಾಸದ ಪ್ರಕಾರ, ನಡೆದಿರುವ ಸಂಗತಿಯ ಪ್ರಕಾರ ರಾಯಣ್ಣ ಯಾವತ್ತೂ ಬ್ರಿಟೀಷರ ವಿರುದ್ಧ ಬಹಿರಂಗ ಯುದ್ಧ ಸಾರಿರಲಿಲ್ಲ. ಆತನ ಹೋರಾಟ ಗೆರಿಲ್ಲಾ ಶೈಲಿಯದ್ದಾಗಿತ್ತು. ಭಾರತದ ಗೆರಿಲ್ಲಾ ಯುದ್ಧದ ಪಿತಾಮಹನೆಂದೇ ಸಂಗೊಳ್ಳಿ ರಾಯಣ್ಣ ಜನಪ್ರಿಯ.