ಸಂಗೊಳ್ಳಿ ರಾಯಣ್ಣ; ದರ್ಶನ್ಗೆ ಇನ್ನೊಂದು ಕಿಡಿ ರೆಡಿ
ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ವಿವಾದಗಳಿಂದಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ದರ್ಶನ್ ಕೇಸ್ ಆಯ್ತು, ನಿಖಿತಾ ಬ್ಯಾನ್ ಆಯ್ತು, ಕಠಾರಿ ವಿವಾದ ಮುಗೀತು, ಅಷ್ಟರಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನಿಗೆ ವಿವಾದದ ಕಿಡಿ ಹೊತ್ತಿಸಲು ರೆಡಿಯಾಗಿದ್ದಾರೆ ವಿವಾದ ಪ್ರಿಯರು!'
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿನ ಅಂಶಗಳಿಗೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಆರೇಳು ತಿಂಗಳುಗಳ ಹಿಂದೆಯೂ ಗ್ರಾಮದ ಮುಖಂಡರಾದ ಮಲ್ಲನಗೌಡ ಪಾಟೀಲ್ ಮತ್ತು ಮಲ್ಲಿಕಾರ್ಜುನ್ ಕುಡೊಳ್ಳಿ ಕಿಡಿ ಕಾರಿದ್ದರು. ಚಿತ್ರದಲ್ಲಿ ಹಲವು ಅಪಭ್ರಂಶಗಳನ್ನು ತೋರಿಸಲಾಗಿದೆ, ಇದು ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈಗ ಇನ್ನೊಬ್ಬರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಸಂಗೊಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಜಶೇಖರ್ ಒಕ್ಕುಂದಮಠ್ ಎಂಬುವವರು ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಅವರು ಸೆನ್ಸಾರ್ ಮಂಡಳಿಗೂ ದೂರು ನೀಡುತ್ತಾರಂತೆ, ಫಲ ಕೊಡದೇ ಇದ್ದರೆ ಹೈಕೋರ್ಟ್ಗೂ ಹೋಗುತ್ತಾರಂತೆ.ಏನಂತಾರೆ ನಾಗಣ್ಣ-ದರ್ಶನ್? ನಮ್ಮ ಸಿನಿಮಾ ಬಿಡುಗಡೆಯೇ ಆಗಿಲ್ಲ. ಅಷ್ಟರಲ್ಲೇ ಚಿತ್ರದಲ್ಲಿ ಆಕ್ಷೇಪಕಾರಿ ಅಂಶಗಳಿವೆ ಅನ್ನೋದು ಅವರಿಗೆ ಹೇಗೆ ಗೊತ್ತಾಯ್ತು? ಸುಖಾ ಸುಮ್ಮನೆ ಆರೋಪ ಮಾಡುವುದು ಬೇಡ. ನಾವು ಭಯ-ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಹಣ ಮಾಡುವ ಉದ್ದೇಶ ನಮ್ಮದಲ್ಲ. ಹಾಗಿದ್ದಿದ್ದರೆ ಯಾವುದೋ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದೆವು. ಮೊದಲು ಸಿನಿಮಾ ನೋಡಿ, ನಂತರ ಮಾತನಾಡಿ ಎಂದು ನಿರ್ದೇಶಕ ನಾಗಣ್ಣ, ನಾಯಕ ದರ್ಶನ್ ಸಂಗೊಳ್ಳಿ ರಾಯಣ್ಣ 'ವಿರೋಧಿ'ಗಳಿಗೆ ಕಿವಿ ಮಾತು ಹೇಳಿದ್ದಾರೆ.