Select Your Language

Notifications

webdunia
webdunia
webdunia
webdunia

ರಮ್ಯಾ ಬದಲಾದಳೇ?!: ಹುಟ್ಟುಹಬ್ಬದಲ್ಲಿ ರಮ್ಯಾ ನಗೆಯ ಬೆಳದಿಂಗಳು!

ರಮ್ಯಾ ಬದಲಾದಳೇ?!: ಹುಟ್ಟುಹಬ್ಬದಲ್ಲಿ ರಮ್ಯಾ ನಗೆಯ ಬೆಳದಿಂಗಳು!
MOKSHA
ಮೊನ್ನೆ ಮೊನ್ನೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಮ್ಯಾ ಪತ್ರಕರ್ತರಲ್ಲನೇಕರಿಗೆ ವಿಚಿತ್ರ ಕುತೂಹಲ ಹುಟ್ಟುಹಾಕಿದರು. ಈವರೆಗೆ ಪತ್ರಕರ್ತರ ಜೊತೆಗೆ ಅಷ್ಟಾಗಿ ಹರಟುವ ಸ್ವಭಾವ ಹೊಂದಿಲ್ಲದ ರಮ್ಯಾ ಮೊನ್ನೆಯ ತನ್ನ ಬರ್ತ್‌‌ಡೇಗೆ ಪತ್ರಕರ್ತರನ್ನು ತಾನೇ ಆಹ್ವಾನಿಸಿ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಅವರೆಲ್ಲರ ಜೊತೆಗೆ ಸಮಯ ಮೀಸಲಿಟ್ಟು ಚೆನ್ನಾಗಿಯೇ ನಗುನಗುತ್ತಾ ಮಾತಾಡಿದರು. ಫೇಸ್‌ಬುಕ್ಕಿನಲ್ಲಿ ತನ್ನ ಅಭಿಮಾನಿಗಳಾದ ಕೆಲ 50 ಮಂದಿಯನ್ನು ತಾನೇ ಆರಿಸಿ ತನ್ನ ಹುಟ್ಟುಹಬ್ಬಕ್ಕೆ ಕರೆಸಿಕೊಂಡು ಅವರ ಜೊತೆಗೂ ಫ್ರೆಂಡ್ಲೀಯಾಗಿಯೇ ಹರಟಿದರು. ಒಟ್ಟಾರೆ ಮೊನ್ನೆಯ ರಮ್ಯಾಳ ಬರ್ತ್‌ಡೇ ಪಾರ್ಟಿಯಲ್ಲಿ ಎಲ್ಲೆಲ್ಲೂ ರಮ್ಯಾಳ ಬೆಳದಿಂಗಳ ನಗು!

ಹೌದು. ಯಾಕೋ ರಮ್ಯಾ ಸ್ವಲ್ಪ ಬದಲಾದಂತೆ ಕಾಣುತ್ತಾರೆ. ಅಭಿಮಾನಿಗಳ ಜೊತೆ ಇಂಟರ್ನೆಂಟ್ಟಿನಲ್ಲಿ ಸಂಪರ್ಕ ಸಾಧಿಸಿದರೂ ಹೊರಗೆ ಸ್ವಲ್ಪ ಅಂತರ ಇಟ್ಟುಕೊಂಡೇ ಮಾತಾಡುವ ನಟಿ ರಮ್ಯಾ. ಪತ್ರಕರ್ತರ ಜೊತೆಗೂ ಅಷ್ಟೇ, ಆಗಾಗ ಜಗಳ, ಕೋಪ ತಾಪಗಳು ಇದ್ದಿದ್ದೇ. ಇಂಥ ರಮ್ಯಾ ಮೊನ್ನೆ ತನ್ನ ಬರ್ತ್‌ಡೇಗೆ ಇದ್ದಕ್ಕಿದ್ದಂತೆ ಎಲ್ಲ ಪತ್ರಕರ್ತರಿಗೂ ಆಹ್ವಾನ ಕಳಿಸಿ ನಗುಮೊಗದಿಂದಲೇ ಸ್ವಾಗತಿಸಿದ್ರು. ಅಷ್ಟೇ ಅಲ್ಲ, ತಾನೇ ಆಹ್ವಾನಿಸಿದ್ದ ಅಭಿಮಾನಿಗಳ ಜೊತೆಗೆ ಬಿಚ್ಚುಮನದಿಂದ ಗಂಟೆಗಟ್ಟಲೆ ಬಿಗುಮಾನವಿಲ್ಲದೆ ಹರಟಿದರು. ಅವರು ಪ್ರೀತಿಯಿಂದ ಕೊಟ್ಟ ಡಜನುಗಟ್ಟಲೆ ಗಿಫ್ಟ್‌ಗಳ್ನೂ ಪ್ರೀತಿಯಿಂದಲೇ ಸ್ವೀಕರಿಸಿದ್ರು. ಜೊತೆಗೆ ತನ್ನ ಹುಟ್ಟುಹಬ್ಬದಂದೇ ಸ್ವಯಂಪ್ರೇರಣೆಯಿಂದ ನಾರಾಯಣ ನೇತ್ರಾಲಯಕ್ಕೆ ತನ್ನ ನೇತ್ರದೊಂದಿಗೆ ತನ್ನ 50 ಅಭಿಮಾನಿಗಳ ನೇತ್ರವನ್ನೂ ದಾನ ಮಾಡುವ ಮೂಲಕ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

webdunia
MOKSHA
ಇತ್ತೀಚೆಗೆ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದ್ದ ರಮ್ಯಾರ ಜಸ್ಟ್ ಮಾತ್ ಮಾತಲಿ ಚಿತ್ರದ ರಂಪಾಟದ ನಂತರವೇಕೋ ರಮ್ಯಾ ಸ್ವಲ್ಪ ತಣ್ಣಗಾದಂತಿದೆ. ಸಂಜು ವೆಡ್ಸ್ ಗೀತಾ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ನಗುನಗುತ್ತಲೇ ಇತ್ತೀಚೆಗೆ ಪತ್ರಕರ್ತರ ಜೊತೆಗೆ ಮಾತಾಡಿದ್ದರು. ಈ ಬಾರಿಯೂ ಅದೇ ನಗು ರಮ್ಯಾ ಮುಖದಲ್ಲಿ ಮುಂದುವರಿದಿದೆ.

ತನ್ನ ಮುಂದಿನ ಚಿತ್ರ ಸಂಜು ವೆಡ್ಸ್ ಗೀತಾ ಬಗ್ಗೆ ರಮ್ಯಾ ತುಂಬ ಭರವಸೆ ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ರಮ್ಯಾ, ''ಜಪಾನ್ ನನಗೆ ಕಾಲ್ ಮಾಡಿ (ಜಪಾನ್ ಎಂದರೆ ನಾಗಶೇಖರ್. ರಮ್ಯಾ ನಾಗಶೇಖರ್ ಅವರನ್ನು ಜಪಾನ್ ಅಂತಲೇ ಕರೆಯೋದು. ರಮ್ಯಾ ನಟಿಸಿದ ಭಟ್ಟರ ರಂಗ ಎಸ್ಎಸ್ಎಲ್‌ಸಿ ಚಿತ್ರದಲ್ಲಿ ನಾಗಶೇಖರ್ ಜಪಾನ್ ಎಂಬ ಪಾತ್ರ ನಿರ್ವಹಿಸಿದ್ದರು) ಕಥೆಯನ್ನು ಹೇಳಿದ್ರು. ನಾಲ್ಕು ವರ್ಷದ ಹಿಂದೆಯೇ ಅವರು ಸಂಜು ವೆಡ್ಸ್ ಗೀತಾ ಚಿತ್ರದ ಕಥೆ ರೆಡಿ ಮಾಡಿಟ್ಟಿದ್ದರು. ಅವರು ಅರಮನೆ ಚಿತ್ರ ಮಾಡೋದಕ್ಕಿಂತಲೂ ಮೊದಲೇ ನಾನವರ ಚಿತ್ರದಲ್ಲಿ ನಟಿಸಬೇಕಾಗಿತ್ತು. ಆದರೆ ಯಾಕೋ ನನ್ನ ಡೇಟ್ಸ್ ಸರಿ ಹೊಂದಲೇ ಇಲ್ಲ. ಈಗ ಸಮಯ ದೊರೆತಿದೆ. ನಾಗಶೇಖರ್ ನನಗಾಗಿ ಕಾದಿದ್ದಾರೆ. ಈ ಚಿತ್ರವಂತೂ ತುಂಬ ಅದ್ಭುತ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ನನ್ನ ಪಾತ್ರದಲ್ಲಿ ಅಭಿನಯಕ್ಕೆ ಮಹತ್ವ ಇದೆ. ಇದು ನನಗೊಂದು ಹೊಸ ಇಮೇಜ್ ಕೊಡುತ್ತೆ ಎಂಬ ನಂಬಿಕೆಯಿದೆ. ಇದು ಬದಲಾಗುವ ಸಮಯ. ನನ್ನ ವೃತ್ತಿ ಜವನದಲ್ಲಿ ಸಂಜು ವಡ್ಸ್ ಗೀತಾ ಚಿತ್ರ ಹೊಸ ಅಧ್ಯಾಯವನ್ನೇ ತೆರೆಯಲಿದೆ'' ಅಂದರು ರಮ್ಯಾ.

ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಂಡದ್ದಕ್ಕೆ ರಮ್ಯಾ ಹೇಳಿಕೊಂಡದ್ದು ಹೀಗೆ, 'ನನಗೆ ಅಪ್ಪಾಜಿ ಆದರ್ಶ. ಅವರು ಅಭಿಮಾನಿಗಳ್ನು ದೇವರೆಂದರು. ನಾನೂ ಈ ಬಾರಿ ಅಭಿಮಾನಿಗಳೊಂದಿಗೆ ಖುಷಿಯಲ್ಲಿ ಬರ್ತ್‌ಡೇ ಆಚರಿಸಿಕೊಂಡೆ. ಅವರೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಿದ್ದು ತುಂಬ ಆಪ್ತ ಕ್ಷಣಗಳು' ಎನ್ನುತ್ತಾರೆ.

ಹುಟ್ಟುಹಬ್ಬದಲ್ಲಿ ರಮ್ಯಾಳ ನಗಮುಖದೊಂದಿಗೆ ಕಂಡ ಬದಲಾದ ಚೆಹರೆಯೊಂದಿಗೆ, ಒಟ್ಟಾರೆ ತಮ್ಮ ವೃತ್ತಿ ಜೀವನದಲ್ಲೂ ರಮ್ಯಾ ಬದಲಾವಣೆ ಬಯಸುತ್ತಿರುವುದು ಸ್ಪಷ್ಟ.

Share this Story:

Follow Webdunia kannada