ಯೋಗಿಗೆ ಸುದೀಪ್ ಸಪೋರ್ಟ್; ನಿರ್ಮಾಪಕರು ಗರಂ
ನಾವೇನು ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿ ಸಿನಿಮಾ ಮಾಡಿ ಅಂತ ಕೇಳ್ತೀವಾ? ಯಾವ ನಾಯಕನೂ ಬಿಕಾರಿಯಲ್ಲ. ಎಲ್ಲರಿಗೂ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ತಾಕತ್ತು ಇದೆ. ಹೀಗಂತ ಲೂಸ್ ಲೂಸಾಗಿ ಮಾತನಾಡಿದ್ದ ಯೋಗೀಶ್ ಹೇಳಿಕೆಯನ್ನು ಬೆಂಬಲಿಸಿರುವುದು ಕಿಚ್ಚ ಸುದೀಪ್!ಇದರೊಂದಿಗೆ ಸ್ಯಾಂಡಲ್ವುಡ್ನಲ್ಲಿನ ಬೆರಳೆಣಿಕೆಯ ನಿರ್ಮಾಪಕರು-ಕಲಾವಿದರ ಸಮರ ಇನ್ನೊಂದು ಮಜಲನ್ನು ತಲುಪಿದೆ. ನಿರ್ಮಾಪಕರ ಹೇಳಿಕೆಯನ್ನು ವಿರೋಧಿಸುವ ಗುಂಪು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ, ಅತ್ತ ನಿರ್ಮಾಪಕರೂ ಒಂದೆಡೆ ಸೇರಿ ತಮ್ಮ ಅಳಿವು-ಉಳಿವಿನ ಬಗ್ಗೆ ಚರ್ಚಿಸುತ್ತಿದ್ದಾರೆ.
ನಿರ್ಮಾಪಕರು ಭಿಕ್ಷುಕರು!ಹೀಗಂತ ಹೇಳಿರುವುದು ಲೂಸ್ ಮಾದ ಯೋಗೀಶ್. ನಾವೇನೂ ನಿರ್ಮಾಪಕರ ಮನೆ ಬಾಗಿಲಿಗೆ ಹೋಗಿ ಸಿನಿಮಾ ಮಾಡಿ ಎಂದು ಹೇಳುತ್ತಿಲ್ಲ. ಅವರೇ ಭಿಕ್ಷುಕರಂತೆ ಬರುತ್ತಾರೆ ಎಂಬರ್ಥದ ಹೇಳಿಕೆಯನ್ನು ಅವರು ನೀಡಿದ್ದರು.ಇಲ್ಲಿ ಯೋಗೀಶ್ ಬಳಸಿರುವ ಭಿಕ್ಷುಕ ಎಂಬ ಪದ ನಿರ್ಮಾಪಕರನ್ನು ಕೆರಳಿಸಿದೆ. ಮೊನ್ನೆ ಮೊನ್ನೆ ಬಂದ ಯೋಗಿಯಂತಹ ನಟ ನಿರ್ಮಾಪಕರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವಷ್ಟು ಎತ್ತರಕ್ಕೆ ಬೆಳೆದರೇ ಅನ್ನೋದು ಅವರ ಪ್ರಶ್ನೆ. ಈ ಸಂಬಂಧ ನಿರ್ಮಾಪಕರ ಸಂಘವು ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದೆ.ಯೋಗಿ ಕ್ಷಮೆ ಕೇಳಿದರಂತೆ...ನಿರ್ಮಾಪಕರ ಸಂಘವು ಯೋಗಿಯ ಸಿನಿಮಾಗಳನ್ನು ಬೆಂಬಲಿಸದೇ ಇರಲು, ಅಂದರೆ ನಿರ್ಮಾಣ ಮಾಡದೇ ಇರುವ ನಿರ್ಧಾರಕ್ಕೆ ನಿನ್ನೆ ಬಂದಿತ್ತು. ಆದರೆ ಅಷ್ಟರಲ್ಲೇ, ಯೋಗಿ ಕ್ಷಮೆ ಕೇಳಿದರೆಂಬ ಸುದ್ದಿಯಾಯ್ತು. ಆಗ ತಮ್ಮ ನಿರ್ಧಾರವನ್ನು ಕೈ ಬಿಟ್ಟ ನಿರ್ಮಾಪಕರು, ಕೆಲ ಹೊತ್ತಿನಲ್ಲೇ ಅವಕ್ಕಾದರು. ಕಾರಣ, ನಾನು ಕ್ಷಮೆ ಕೇಳಿಯೇ ಇಲ್ಲ ಎಂದು ಯೋಗಿ ಹೇಳಿದ್ದು.