ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಮೇಸ್ತ್ರಿ' ಚಿತ್ರದಲ್ಲಿ ಸ್ನೇಹಪೂರ್ವಕವಾಗಿ ಒಂದು ಸಾಹಸ ಸನ್ನಿವೇಶದಲ್ಲಿ ಭಾಗವಹಿಸುವರು ಎಂದು ಹೇಳಲಾಗಿತ್ತು. ಅದರಂತೆ ಈಗಾಗಲೇ ಮೂರು ದಿನಗಳ ಚಿತ್ರೀಕರಣದಲ್ಲಿ ನಟ ದರ್ಶನ್ ಅಭಿನಯಿಸಿದ್ದು ಸಾಹಸ ಸನ್ನಿವೇಶಗಳು ಕ್ಯಾಮರಾ ತುಂಬಿಕೊಂಡಿವೆ. ದರ್ಶನ್ ಈ ಹಿಂದೆ ಕೆಲವು ಚಿತ್ರಗಳಲ್ಲಿ ಅತಿಥಿ ನಟರಾಗಿ ಹಾಗೂ ಅವರದೇ ನಿರ್ಮಾಣದ 'ಜೊತೆ ಜೊತೆಯಲಿ' ಮತ್ತು 'ಅರಸು' ಚಿತ್ರಗಳಲ್ಲಿ ಅಭಿನಯಿಸಿದ್ದರು.
' ಮೇಸ್ತ್ರಿ' ಚಿತ್ರಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರ, ಬಂಗಾರಪ್ಪ ಸ್ಲಮ್, ವಿಶ್ವವಿದ್ಯಾಲಯ, ನಂಜನಗೂಡು, ವೇಣುಗೋಪಾಲಸ್ವಾಮಿ ಬೆಟ್ಟ, ಸಕಲೇಶಪುರ, ಮಂಗಳೂರು ಮತ್ತಿತರ ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ ಎಂದು ಚಿತ್ರದ ನಟ ಹಾಗೂ ನಿರ್ಮಾಪಕ ಬಾಲು ತಿಳಿಸಿದ್ದಾರೆ.
' ನಂದಾ ಲವ್ಸ್ ನಂದಿತಾ' ಚಿತ್ರಕ್ಕೆ ಜಿಂಕೆ ಮರಿ ಹಾಡನ್ನು ಬರೆದ ರಾಜಕಿರಣ್ 'ಮೇಸ್ತ್ರಿ' ಚಿತ್ರಕ್ಕೆ ನಿರ್ದೇಶಕರು. ಇಂದಿನ ಸಮಾಜದಲ್ಲಿ ಮಾನವೀಯತೆ ಮರೆಯಾಗುತ್ತಿರುವುದನ್ನು ಚಿತ್ರದಲ್ಲಿ ಒತ್ತಿ ಹೇಳಲಾಗಿದೆಯಂತೆ. ಹರೀಶ್ ಶೃಂಗ ಈ ಚಿತ್ರಕ್ಕೆ ಸಂಭಾಷಣೆ ನೀಡಿದ್ದಾರೆ. ನಿರಂಜನ ಬಾಬು ಚಿತ್ರದ ಛಾಯಾಗ್ರಾಹಕರು.
' ಮೇಸ್ತ್ರಿ' ಚಿತ್ರದ ತಾರಾಗಣದಲ್ಲಿ ಬಾಲು ಮತ್ತು ರಾಣಿ ಮುಖ್ಯ ಪಾತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗದ ಖಳ ನಟ ಚಂಬನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.