Select Your Language

Notifications

webdunia
webdunia
webdunia
webdunia

ಮತ್ತೆ ಶುರು ಸೂರಿ-ವಿಜಯ್ ದುನಿಯಾ ಮೇನಿಯಾ

ಮತ್ತೆ ಶುರು ಸೂರಿ-ವಿಜಯ್ ದುನಿಯಾ ಮೇನಿಯಾ
SUJENDRA
ಬ್ಲ್ಯಾಕ್ ಕೋಬ್ರಾ ವಿಜಯ್‌ಗೆ 'ದುನಿಯಾ' ಕೊಟ್ಟ ಸೂರಿ ಈಗ ಇನ್ನೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತನ್ನ ಕಥೆಯೊಂದಕ್ಕೆ ವಿಜಯ್ ಅವರನ್ನೇ ಹೀರೋ ಮಾಡಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರವನ್ನು ಸೂರಿ ನಿರ್ದೇಶನ ಮಾಡ್ತಿಲ್ಲ. ಬದಲಿಗೆ ಅವರ ಶಿಷ್ಯ ದಾಡಿ ವಿಜಿ ಆಕ್ಷನ್-ಕಟ್ ಹೇಳ್ತಾರೆ.

ಈ ಸುದ್ದಿ ಕೆಲವು ತಿಂಗಳಿಂದ ಚಾಲ್ತಿಯಲ್ಲಿತ್ತು. ಆದ್ರೆ ಈಗ ಖಾತ್ರಿಯಾಗಿದೆ. ಸೂರಿ ಕಥೆ, ಚಿತ್ರಕಥೆ, ಸಂಭಾಷಣೆಯಿರುವ ಈ ಚಿತ್ರ 'ಜಯಮ್ಮನ ಮಗ'. ಸ್ವತಃ ವಿಜಯ್ ಇದನ್ನು ನಿರ್ಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ನಿರ್ಮಾಪಕರ ಕೈ ಬದಲಾಗಿದೆ. ವಿಜಯ್ ಬದಲು ಜಯಣ್ಣ ಹಣ ಹಾಕಲು ಮುಂದಾಗಿದ್ದಾರೆ.

ಇನ್ನು ಚಿತ್ರದ ಹೆಸರು 'ಜಯಮ್ಮನ ಮಗ' ಅಂತ ಯಾಕೆ ಇಟ್ಟಿದ್ದಾರೆ ಎಂಬ ಯೋಚನೆ ನಿಮಗೆ ಬಂದಿದ್ದರೆ, ಅದಕ್ಕೆ ಉತ್ತರವಿದೆ. ಒಂದು ಕಾಲದಲ್ಲಿ ತಾಯಿಯನ್ನು ನಿರ್ಲಕ್ಷಿಸಿದ ಆರೋಪ ಎದುರಿಸಿದ್ದ ವಿಜಯ್, ತನ್ನದೇ ಹೋಮ್ ಪ್ರೊಡಕ್ಷನ್ ಇತ್ತೀಚೆಗಷ್ಟೇ ಘೋಷಿಸಿದ್ದರು. ಅದರ ಹೆಸರು 'ದುನಿಯಾ ಟಾಕೀಸ್'.

ಅಮ್ಮನ ಆಶೀರ್ವಾದದಿಂದ ಈ ಪ್ರೊಡಕ್ಷನ್ ಹೌಸ್ ಶುರುವಾಗಿದೆ. ಇದೇ 'ದುನಿಯಾ ಟಾಕೀಸ್'ನಿಂದ 'ಜಯಮ್ಮನ ಮಗ' ಚಿತ್ರವೂ ಹೊರ ಬರಲಿದೆ. ಇಲ್ಲಿ ಜಯಮ್ಮನ ಮಗ ಎಂಬ ಶೀರ್ಷಿಕೆಗೆ ನನ್ನ (ನಾರಾಯಣಮ್ಮ) ತಾಯಿ ಮತ್ತು ನನ್ನ (ವಿಜಯ್) ಹೆಸರಿನ ಕೊನೆಯ ಅಕ್ಷರಗಳನ್ನು ಬಳಸಲಾಗಿದೆ ಎಂದಿದ್ದರು.

'ದುನಿಯಾ ಟಾಕೀಸ್'ನಿಂದ ಈ ಚಿತ್ರ ಯಾಕೆ ನಿರ್ಮಾಣವಾಗುತ್ತಿಲ್ಲ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಿರ್ದೇಶನದ ಹೊಣೆಯನ್ನೂ ಸೂರಿ ಹೊತ್ತುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ಅವರ ಶಿಷ್ಯ ದಾಡಿ ವಿಜಿ ಪಾಲಾಗಿದೆ. ಆದರೆ ಈ ಹಿಂದಿನಂತೆ ಯೋಗರಾಜ್ ಭಟ್‌ರ ಸಾಹಿತ್ಯ ಇಲ್ಲೂ ಇರಲಿದೆಯಂತೆ.

ಪ್ರಸಕ್ತ ಸೂರಿ ತನ್ನ ನಿರ್ದೇಶನದ 'ಅಣ್ಣಾ ಬಾಂಡ್'ನಲ್ಲಿ ಬ್ಯುಸಿ. ಆ ಚಿತ್ರ ಇನ್ನೊಂದೆರಡು ತಿಂಗಳಲ್ಲಿ ತೆರೆಗೆ ಬರಲಿದೆ. ಅದಾದ ನಂತರ 'ಜಯಮ್ಮನ ಮಗ'ನಿಗೆ ಸೂರಿ ಸಂಭಾಷಣೆ ಬರೆಯಲು ಶುರು ಮಾಡುತ್ತಾರಂತೆ.

Share this Story:

Follow Webdunia kannada