Select Your Language

Notifications

webdunia
webdunia
webdunia
webdunia

'ಬುದ್ಧಿವಂತ' ಉಪ್ಪಿಗೆ ಅಪ್ಪು ಪ್ರಶ್ನೆ: ಏ.24ಕ್ಕೆ ಮರೆಯದೆ ನೋಡಿ!

'ಬುದ್ಧಿವಂತ' ಉಪ್ಪಿಗೆ ಅಪ್ಪು ಪ್ರಶ್ನೆ: ಏ.24ಕ್ಕೆ ಮರೆಯದೆ ನೋಡಿ!
, ಸೋಮವಾರ, 22 ಏಪ್ರಿಲ್ 2013 (13:39 IST)
PR
PR
ರಿಯಲ್ ಸ್ಟಾರ್ ಉಪೇಂದ್ರ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಭಾಗವಹಿಸಿದ್ದಾರೆ ಅನ್ನೋದನ್ನು ಕೆಲ ದಿನಗಳ ಹಿಂದೆಯೇ ಓದಿರುತ್ತೀರಿ. ಆದರೆ ಆ ಸಂಚಿಕೆ ಯಾವಾಗ ಪ್ರಸಾರ ಅನ್ನೋದು ಖಚಿತವಿರಲಿಲ್ಲ. ಈಗ ಘೋಷಣೆಯಾಗಿದೆ. ವರನಟ ಡಾ. ರಾಜ್‌ಕುಮಾರ್ ಜನ್ಮದಿನದಂದೇ, ಅಂದರೆ ಏಪ್ರಿಲ್ 24ರಂದು ರಾತ್ರಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಆದರೆ ಪವರ್ ಸ್ಟಾರ್ ಪುನೀತ್ ಎಸೆಯುವ ಸವಾಲಿನ ಪ್ರಶ್ನೆಗಳಿಗೆ 'ಬುದ್ಧಿವಂತ' ಉಪೇಂದ್ರ ಸಮರ್ಪಕವಾಗಿ ಉತ್ತರಿಸಿದಂತಿಲ್ಲ. ಅವರ ಉತ್ತರಗಳು 6.40 ಲಕ್ಷ ರೂಪಾಯಿಗಳಿಗೇ ಸೀಮಿತಗೊಂಡಿದೆ. ಆದರೆ ಸಿಕ್ಕಿರುವ ಅವಕಾಶದಲ್ಲೇ ತಾನು ಬೆಳೆದು ಬಂದ ರೀತಿ, ರಾಜ್ ಬ್ಯಾನರ್ ಸಹಕಾರ, ಅವರ ಪುತ್ರರ ಜತೆಗಿನ ಒಡನಾಟದ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.

ಹಾಟ್ ಸೀಟಿನಲ್ಲಿ ಪುನೀತ್ ಎದುರು ಕೂತು ಒಂದಷ್ಟು ತನ್ನ ಜನಪ್ರಿಯ ಡೈಲಾಗುಗಳನ್ನೂ ಒಗೆದಿದ್ದಾರೆ. ಓಳು ಬರೀ ಓಳು... ವಿಚಿತ್ರ ಡ್ಯಾನ್ಸ್‌ಗೂ ಹೆಜ್ಜೆ ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಈ ಹಿಂದೆ ಹಾಟ್ ಸೀಟ್‌ನಲ್ಲಿ ಕುಳಿತ ಇಬ್ಬರು ಸೆಲೆಬ್ರಿಟಿಗಳಾದ ಅನಿಲ್ ಕುಂಬ್ಳೆ ಮತ್ತು ರವಿಚಂದ್ರನ್ ತಲಾ 25 ಲಕ್ಷ ರೂಪಾಯಿ ಗೆದ್ದಿದ್ದರು. ಉಳಿದಂತೆ ಇತ್ತೀಚೆಗಷ್ಟೇ ಭಾಗವಹಿಸಿದ್ದ ಮಾಲಾಶ್ರೀ ಹಾಗೂ ಸೃಜನ್ ಲೋಕೇಶ್ ಕೂಡ 6.40 ಲಕ್ಷ ರೂ. ಗೆದ್ದಿದ್ದರು. ಲಕ್ಕಿ ಸ್ಟಾರ್ ರಮ್ಯಾ ಗೆದ್ದದ್ದು 3.20 ಲಕ್ಷ.

ಉಪೇಂದ್ರ ಗೆದ್ದಿರುವ 6.40 ಲಕ್ಷ ರೂ.ಗಳನ್ನು ಎಲ್ಲ ಸೆಲೆಬ್ರಿಟಿಗಳಂತೆ ದಾನ ಮಾಡಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಬಾಲ್ಯಾಳು ಮತ್ತು ಚಿಂಚಲಗೊಪ್ಪೆ ಗ್ರಾಮಗಳ ಶಾಲೆಗಳಿಗೆ ಉಪ್ಪಿ ಗೆದ್ದ ಹಣ ಸಂದಾಯವಾಗುತ್ತಿದೆ.

Share this Story:

Follow Webdunia kannada