ಬಿಎಸ್ಆರ್ ತೊರೆಯಲು ಪೂಜಾ ಗಾಂಧಿ ಕಾರಣ ಅಲ್ಲ: ರಕ್ಷಿತಾ
, ಬುಧವಾರ, 17 ಏಪ್ರಿಲ್ 2013 (10:13 IST)
ಮಳೆ ಹುಡುಗಿ ಪೂಜಾ ಗಾಂಧಿ ಜೆಡಿಎಸ್ನಿಂದ ಹೊರ ಬಿದ್ದು, ಕೆಜೆಪಿಯಿಂದಲೂ ದೂರ ಸರಿದು ಬಿಎಸ್ಆರ್ ಸೇರುವಾಗಲೇ ನಟಿ ರಕ್ಷಿತಾ ನಿಂತಿದ್ದ ಜಾಗ ಕದಲಿತ್ತು. ಅದುವರೆಗೆ ಬಿಎಸ್ಆರ್ಗೆ ರಕ್ಷಿತಾ ಮಾತ್ರ ಸ್ಟಾರ್ ಪ್ರಚಾರಕಿ. ಆದರೆ ಪೂಜಾ ಗಾಂಧಿ ಬಂದ ಮೇಲೆ ಶ್ರೀರಾಮುಲು ಪಾರ್ಟಿಗೆ ತೂಕ ಹೆಚ್ಚಾಗಿತ್ತು. ರಕ್ಷಿತಾ ಮೂಲೆಗುಂಪಾಗಿದ್ದರು!ಇದು ಪೂಜಾ ಗಾಂಧಿ ಬಿಎಸ್ಆರ್ ಪಕ್ಷಕ್ಕೆ ಸೇರ್ಪಡೆಯಾಗುವ ಸಮಾರಂಭದಲ್ಲೇ ಬಹಿರಂಗವಾಗಿತ್ತು. ಅಷ್ಟರಲ್ಲೇ ಇಬ್ಬರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿರುವುದು ಸ್ಪಷ್ಟವಾಗಿತ್ತು. ಆದರೂ ಇದೀಗ ಬಿಎಸ್ಆರ್ ತೊರೆದು ಜೆಡಿಎಸ್ ಸೇರಿರುವ ರಕ್ಷಿತಾ, ಇದಕ್ಕೆ ಪೂಜಾ ಗಾಂಧಿ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಚಿತ್ರರಂಗದ ಸ್ನೇಹಿತರಲ್ಲಿ ಪೂಜಾ ಗಾಂಧಿ ಕೂಡ ಒಬ್ಬರು. ಅವರು ನನ್ನ ಹೋಮ್ ಪ್ರೊಡಕ್ಷನ್ನಲ್ಲಿಯೂ ನಟಿಸಿದ್ದರು. ನಾನು ಬಿಎಸ್ಆರ್ ಕಾಂಗ್ರೆಸ್ನಿಂದ ಹೊರ ಬರಲು ಪೂಜಾ ಕಾರಣರಲ್ಲ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ನಾನು ಪಕ್ಷ ತೊರೆದಿದ್ದೇನೆ ಎಂದು ಜೆಡಿಎಸ್ ಸೇರ್ಪಡೆಯಾದ ನಂತರ ರಕ್ಷಿತಾ ಪ್ರತಿಕ್ರಿಯೆ ನೀಡಿದ್ದಾರೆ.ಸೋಮವಾರ ಬೆಳಗ್ಗೆ ದೇವೇಗೌಡರ ನಿವಾಸಕ್ಕೆ ಪತಿ-ನಿರ್ದೇಶಕ ಪ್ರೇಮ್ ಮತ್ತು ಬೆಂಬಲಿಗರ ಜತೆ ತೆರಳಿದ ರಕ್ಷಿತಾ, ಜೆಡಿಎಸ್ ಸೇರ್ಪಡೆಯಾದರು. ಆದರೆ ಅವರು ಜೆಡಿಎಸ್ ಟಿಕೆಟ್ನಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಖಚಿತತೆಯಿಲ್ಲ. ಈಗಾಗಲೇ ಬಹುತೇಕ ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾಗಿರುವುದರಿಂದ ರಕ್ಷಿತಾಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.ಶ್ರೀರಾಮುಲು ಅವರಿಂದ ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಇತರ ನಾಯಕರು ಸಮಸ್ಯೆ ಸೃಷ್ಟಿಸಿದರು. ದೇವೇಗೌಡ ಮತ್ತು ಕುಮಾರಸ್ವಾಮಿಯವರ ಕಾರ್ಯವೈಖರಿಯನ್ನು ಮೆಚ್ಚಿ ಜೆಡಿಎಸ್ಗೆ ಸೇರ್ಪಡೆಯಾಗಿದ್ದೇನೆ. ನಾನು ಯಾವುದೇ ಷರತ್ತನ್ನು ಇದಕ್ಕಾಗಿ ಹಾಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಹಿತಕ್ಕಾಗಿ ದುಡಿಯುತ್ತೇನೆ ಎಂದು ರಕ್ಷಿತಾ ಪಕ್ಷ ಸೇರಿದ ನಂತರ ತಿಳಿಸಿದರು.ರಕ್ಷಿತಾ ಬಿಎಸ್ಆರ್ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವುದಕ್ಕೆ ಪೂಜಾ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.