Select Your Language

Notifications

webdunia
webdunia
webdunia
webdunia

'ಬಸವಣ್ಣ' ಪೋಸ್ಟರ್: ಕಾಲು ಬಾಯಿಗೆ ಹಾಕಿಕೊಂಡ ಉಪೇಂದ್ರ?

'ಬಸವಣ್ಣ' ಪೋಸ್ಟರ್: ಕಾಲು ಬಾಯಿಗೆ ಹಾಕಿಕೊಂಡ ಉಪೇಂದ್ರ?
, ಮಂಗಳವಾರ, 14 ಮೇ 2013 (14:18 IST)
PR
'ಬಸವಣ್ಣ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಇದುವರೆಗೆ 'ಬಸವಣ್ಣ' ಹೆಸರಷ್ಟೇ ವಿವಾದವಾಗಿತ್ತು, ಆದರೆ ಈಗ ಪೋಸ್ಟರ್ ಅದನ್ನೂ ಮೀರಿಸಿದೆ. ಸ್ಪಷ್ಟವಾಗಿ ವಿವಾದವನ್ನು ಹುಟ್ಟು ಹಾಕಲೆಂದೇ ರಚಿಸಲಾಗಿರುವ ಪೋಸ್ಟರ್ ಎಂಬುದನ್ನು ಯಾರು ಬೇಕಾದರೂ ಹೇಳಬಹುದು!

ಒಂದು ಸಮುದಾಯ ಮಾತ್ರವಲ್ಲ, ಇಡೀ ನಾಡು ಗೌರವಿಸುವ ಬಸವಣ್ಣನ ಹೆಸರಿಗೆ ಮಸಿ ಬಳಿಯುವ ಸಂಚು ಎಂಬಂತೆ ಚಿತ್ರದ ಪೋಸ್ಟರ್ ರಚಿಸಲಾಗಿದೆ. ಒಂದು ಕಡೆ ಬಸವಣ್ಣನನ್ನು ಬಿಂಬಿಸುವಂತೆ ನಾಮ, ಇನ್ನೊಂದೆಡೆ ತಪೋ ಭಂಗಿ. ಇದಕ್ಕೆ ಅಪವಾದವೆನಿಸಿರುವುದು ಕೆಳಗೆ ಇಟ್ಟಿರುವ ಪಿಸ್ತೂಲ್.

ಅಂದ ಹಾಗೆ ಇದರ ಕರ್ತೃ 'ದಂಡುಪಾಳ್ಯ' ನಿರ್ದೇಶಕ ಶ್ರೀನಿವಾಸ ರಾಜು. ಅವರಿಗೆ ವಿವಾದವೇ ಉಸಿರು. 'ದಂಡುಪಾಳ್ಯ' ಚಿತ್ರದಲ್ಲಿ ವಿವಾದಗಳಿಂದಲೇ ಅರ್ಧ ಗೆದ್ದವರು ನಂತರ ಹಸಿ ಹಸಿ ಹಿಂಸೆ ತೋರಿಸಿ, ಉಳಿದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುಕೊಂಡು ಬಂದಿದ್ದರು. ಅದರಿಂದ ಆದ ಅನಾಹುತಗಳೂ ಅಷ್ಟಿಷ್ಟಲ್ಲ. ಸಾಕಷ್ಟು ಕಡೆ ಪಾತಕ ಕೃತ್ಯಗಳಿಗೆ 'ದಂಡುಪಾಳ್ಯ' ಚಿತ್ರವೇ ಪ್ರೇರಣೆಯಾಯಿತು ಎಂಬ ಆರೋಪಗಳೂ ಇವೆ.

ಈಗ ಅದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸೇರಿಕೊಂಡಿದ್ದಾರಾ ಎಂಬ ಶಂಕೆ ಮೂಡಿದೆ. ಇದುವರೆಗೆ ಎಲ್ಲೂ ಉಪ್ಪಿ ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಹೇಳಿಕೊಂಡಿಲ್ಲ. 'ಬಸವಣ್ಣ' ಚಿತ್ರದ ಹೆಸರನ್ನೂ ಪ್ರಸ್ತಾಪಿಸಿಲ್ಲ. ಆದರೆ ಶ್ರೀನಿವಾಸ ರಾಜು ವಿವಾದಕ್ಕೆ ತುಪ್ಪ ಸುರಿಯುತ್ತಿದ್ದರೂ ಉಪ್ಪಿ ಸುಮ್ಮನಿರುವುದು ಶಂಕೆಗೆ ಈಡು ಮಾಡಿದೆ. ಉಪ್ಪಿ ಪರೋಕ್ಷವಾಗಿ ಬೆಂಬಲಿಸುತ್ತಿರಬಹುದೇ? ವಿವಾದ ಸೃಷ್ಟಿಯಾಗಲು ಕಾಯುತ್ತಿರಬಹುದೇ?

ಉಪ್ಪಿಗೂ ಇಂತಹ ವಿವಾದಗಳಿಗೂ ಎಲ್ಲಿಲ್ಲದ ನಂಟು. ಈ ಹಿಂದೆ 'ಮಾಸ್ತಿ' ಎಂಬ ಹೆಸರಿನ ಚಿತ್ರದಲ್ಲಿ ನಟಿಸಲು ಹೋಗಿ ಕಾಲು ಬಾಯಿಗೆ ಹಾಕಿಕೊಂಡಿದ್ದರು. ಕಳೆದ ವರ್ಷ ಬಿಡುಗಡೆಯಾದ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರದಲ್ಲೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಅಷ್ಟಾದರೂ ಮತ್ತೆ 'ಬಸವಣ್ಣ'ನ ಹೆಸರಿನಲ್ಲಿ ಸಮಾಜವನ್ನು ಪ್ರಚೋದಿಸಲು ಹೊರಟಿದ್ದಾರೆಯೇ ಎಂದು ಸಾಮಾಜಿಕ ಸಂಪರ್ಕತಾಣಗಳಲ್ಲಿ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಈ ನಡುವೆ ಶ್ರೀನಿವಾಸ ರಾಜು ಸ್ಪಷ್ಟನೆ ನೀಡುವ ಮೂಲಕ ತಿಪ್ಪೆ ಸಾರಿದ್ದಾರೆ. 'ಬಸವಣ್ಣ' ಚಿತ್ರಕ್ಕೂ ಬಸವಣ್ಣನಿಗೂ ಯಾವುದೇ ಸಂಬಂಧವಿಲ್ಲ. ಚಿತ್ರದ ಪೋಸ್ಟರ್ ನೋಡಿ, ಫಸ್ಟ್ ಲುಕ್ ನೋಡಿ ನಿರ್ಧಾರಕ್ಕೆ ಬರಬೇಡಿ. ಚಿತ್ರವನ್ನು ಬಸವಣ್ಣನಿಗೆ ಸಂಬಂಧ ಕಲ್ಪಿಸಬೇಡಿ. ಕಥೆಯ ಬಗ್ಗೆ ಈಗಲೇ ಏನನ್ನೂ ಹೇಳಲಾರೆ ಎಂದಿದ್ದಾರೆ.

ಮುಂದಿನ ತಿಂಗಳು ಚಿತ್ರೀಕರಣ ಆರಂಭವಂತೆ. ಚಿತ್ರದಲ್ಲಿ ಉಪ್ಪಿಗೆ ಇಬ್ಬರು ನಾಯಕಿಯರು. ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ.

Share this Story:

Follow Webdunia kannada