Select Your Language

Notifications

webdunia
webdunia
webdunia
webdunia

ಪೂಜಾ ಗಾಂಧಿಯಿಂದ ದೀಪಕ್ ಹಣೆಬರಹ ಬದಲಾಗುವುದೇ?

ಪೂಜಾ ಗಾಂಧಿಯಿಂದ ದೀಪಕ್ ಹಣೆಬರಹ ಬದಲಾಗುವುದೇ?
MOKSHA
ಕೆಲವರಿಂದ ಶಂಕರ್ ನಾಗ್ ಥರಾನೇ ಇದ್ದೀಯಾ ಎಂದು ಬೆನ್ನು ತಟ್ಟಿಸಿಕೊಂಡರೂ ಲಾಭ ಪಡೆಯಲು ವಿಫಲನಾದ ಒಂದು ಚಿತ್ರದ ನಾಯಕ ದೀಪಕ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಬಾರಿ ಅವರಿಗೆ ಜತೆಯಾಗಿರುವುದು ಮಳೆ ಹುಡುಗಿ ಪೂಜಾ ಗಾಂಧಿ.

ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸವಿಲ್ಲದೆ ಕುಳಿತವರಲ್ಲಿ ಮೊದಲಿಗೆ ದೀಪಕ್. 'ಶಿಷ್ಯ'ದಲ್ಲಿ ಒಂದಷ್ಟು ಹೆಸರು ಪಡೆದುಕೊಂಡರೂ ಅದು ನಂತರದ ಚಿತ್ರಗಳಲ್ಲಿ ಖುಲಾಯಿಸಿರಲಿಲ್ಲ. ಆ ಚಿತ್ರಗಳು ಬಿಡುಗಡೆಯಾಗದೆ ಮೂಲೆ ಸೇರಿವೆ. ಆದರೂ, ಸಮಯಕ್ಕಾಗಿ ಕಾಯುತ್ತಿದ್ದ ದೀಪಕ್, ಈ ಮಧ್ಯೆ ಚೆನ್ನೈಗೆ ತೆರಳಿ ಮೇಕಪ್ ತರಬೇತಿ ಪಡೆದು ಬಂದಿದ್ದಾರೆ.

ದೀಪಕ್ ಅಭಿನಯದ '18 ಕ್ರಾಸ್', 'ದೀನ' ಹಾಗೂ 'ತ್ಯಾಗು' ಚಿತ್ರಗಳು ಪೂರ್ಣಗೊಂಡು ಸುಮಾರು ಎರಡು ವರ್ಷಗಳು ಕಳೆದರೂ ಅವುಗಳಿಗೆ ಬಿಡುಗಡೆ ಭಾಗ್ಯ ಬಂದಿಲ್ಲ. ಇದಕ್ಕೆ ಕಾರಣಗಳು ಹಲವಾರು. '18 ಕ್ರಾಸ್' ನಿರ್ಮಾಪಕರು ನಿಧನರಾದರು, 'ದೀನ' ಮತ್ತು 'ತ್ಯಾಗು' ಚಿತ್ರಗಳಿಂದಾಗಿ ನಿರ್ಮಾಪಕರಿಗೆ ಹಲವಾರು ಸಮಸ್ಯೆ ಎದುರಾದವು. ಈ ಬೆಳವಣಿಗೆಯಿಂದ ದೀಪಕ್‌ಗೆ ನೋವಾಗಿರುವುದು ನಿಜ.

ಈಗ ಅವರು ನಟಿಸುತ್ತಿರುವ ಹೊಸ ಚಿತ್ರದ ಹೆಸರು 'ಜನವರಿ 1 ಬಿಡುಗಡೆ'. ಕೊಂಚ ವಿಚಿತ್ರ ಶೀರ್ಷಿಕೆ. ತಮಿಳು ಮೂಲದ ವರ್ಮಾ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಕನ್ನಡ ಚಿತ್ರದಲ್ಲಿ ಪೂಜಾ ಗಾಂಧಿ ನಾಯಕಿ.

ಒಂದು ರೀತಿಯಲ್ಲಿ ಪೂಜಾ ಗಾಂಧಿ ಮತ್ತು ದೀಪಕ್ ಇಬ್ಬರೂ ಸಮಾನ ದುಃಖಿಗಳು. ಕಳೆದ ವರ್ಷ ಪೂಜಾ ಚಿತ್ರಗಳು ಕೂಡ ಮಕಾಡೆ ಮಲಗಿದ್ದವು. ಅವರಿಗೂ ಒಂದು ಬ್ರೇಕ್ ಕೊಡುವ ಚಿತ್ರದ ಅಗತ್ಯವಿದೆ. ಆ ನಿಟ್ಟಿನಲ್ಲಿ ಈಗ ಇಬ್ಬರೂ ಆಶಾವಾದಿಗಳು.

ಚಿತ್ರ ನಿರ್ಮಾಪಕ ಯುಗಂಧರ್ ಸಹ ನೆರೆಯ ತಮಿಳುನಾಡಿನವರು. ತಾರಾಬಳಗದಲ್ಲಿ ಮಿಥುನ್, ನಾಗಕಿರಣ್, ರಮೇಶ್ ಭಟ್, ತುಳಸಿ ಶಿವಮಣಿ, ಸಾಧು ಕೋಕಿಲ ಹಾಗೂ ಗುರುಪ್ರಸಾದ್ ಇತರರು ಇದ್ದಾರೆ. ಗೋಪಿ ಅವರ ಸಂಗೀತ, ಸತ್ಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ.

ಒಂದು ಚಿತ್ರದಲ್ಲಿ ನಟಿಸಿದ ನಂತರ ಕೈಗೆ ಬಂದ ಮೂರು ಚಿತ್ರಗಳು ಬಿಡುಗಡೆ ಕಾಣದೇ ಇರುವ ಹೊತ್ತಿನಲ್ಲಿ 'ಜನವರಿ 1 ಬಿಡುಗಡೆ' ಎಂಬ ಬಿಡುಗಡೆಯ ಹೆಸರನ್ನೇ ಹೊಂದಿರುವ ಚಿತ್ರ ದೀಪಕ್‌ಗೆ ಸಿಕ್ಕಿರುವುದು ವಿಚಿತ್ರವಲ್ಲವೇ? ಇದಾದರೂ ಬಿಡುಗಡೆ ಕಾಣಬಹುದೆಂದು ನಿರೀಕ್ಷಿಸಬಹುದೇ?

Share this Story:

Follow Webdunia kannada