Select Your Language

Notifications

webdunia
webdunia
webdunia
webdunia

ಪಾರು ವೈಫ್ ಆಫ್ ದೇವದಾಸ್; ಭಗ್ನಪ್ರೇಮಿಯಾಗಿ ಕಿಟ್ಟಿ

ಪಾರು ವೈಫ್ ಆಫ್ ದೇವದಾಸ್; ಭಗ್ನಪ್ರೇಮಿಯಾಗಿ ಕಿಟ್ಟಿ
SUJENDRA
ಶ್ರೀನಗರ ಕಿಟ್ಟಿ ಕೈಗೆ ಮತ್ತೆ ಬಾಟ್ಲಿ ಬರೋದು ಗ್ಯಾರಂಟಿಯಾಗಿದೆ. 'ಇಂತಿ ನಿನ್ನ ಪ್ರೀತಿಯ'ಲ್ಲಿ ಸಿಕ್ಕಾಪಟ್ಟೆ ಮಂಪರು ಹತ್ತಿಸಿಕೊಂಡು ದೇವದಾಸನಾಗಿದ್ದ ಕಿಟ್ಟಿ ಈ ಬಾರಿ ನಿಜಕ್ಕೂ ದೇವದಾಸನಾಗುತ್ತಿದ್ದಾರೆ. ಅವರ ಪ್ರೀತಿಯ ಪಾರುವಾಗಿ ದೆಹಲಿ ಹುಡುಗಿ ಸಾಕ್ಷಿ ಆಯ್ಕೆಯಾಗಿದ್ದಾರೆ. ಚಿತ್ರದ ಹೆಸರೇ 'ಪಾರು ವೈಫ್ ಆಫ್ ದೇವದಾಸ್'!

ಪಯಣ, ಸಂಚಾರಿ ಎಂಬ ಎರಡು ಭರವಸೆಯ ಚಿತ್ರಗಳನ್ನು ನಿರ್ದೇಶಿಸಿ ಒಂಚೂರು ಗುರುತಿಸಿಕೊಂಡ ಕಿರಣ್ ಗೋವಿ ಇದರ ನಿರ್ದೇಶಕ. ಶಿವಾನಂದ ಮಾದಶೆಟ್ಟಿ ನಿರ್ಮಾಪಕ.

'ಪಾರು ವೈಫ್ ಆಫ್ ದೇವದಾಸ್' ಚಿತ್ರದ ಸುದ್ದಿ ಇದೇನೂ ಹೊಸತಲ್ಲ. ಕೆಲವು ಸಮಯದ ಹಿಂದೆಯೇ ಈ ಬಗ್ಗೆ ಕೇಳಿ ಬಂದಿತ್ತು. ಆದರೆ ನಾಯಕ ಶ್ರೀನಗರ ಕಿಟ್ಟಿ ಬ್ಯುಸಿಯಾಗಿದ್ದರು. ಹಾಗಾಗಿ ಚಿತ್ರ ಸೆಟ್ಟೇರಲೇ ಇಲ್ಲ. ಈಗ ಎಲ್ಲವೂ ಪಕ್ಕಾ ಆದಂತಿದೆ. ಮಾರ್ಚ್ 30ರಂದು ಮುಹೂರ್ತ ಎಂದು ನಿರ್ಧರಿಸಲಾಗಿದೆ.

ಕಿಟ್ಟಿಗೆ ಸಾರಾಯಿ ಕುಡಿಸುವ ಪಾರುವಾಗಿ ದೆಹಲಿ ಹುಡುಗಿ ಸಾಕ್ಷಿಯನ್ನು ಈಗಷ್ಟೇ ಆಯ್ಕೆ ಮಾಡಲಾಗಿದೆ. ಮಿಸ್ ಥಾಯ್ಲೆಂಡ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಭಾರತಕ್ಕೆ ಕಿರೀಟ ತಂದ ಹುಡುಗಿ ಅಭಿನಯದಲ್ಲೂ ಮುಂದೆ. ಕಾರಣ, ನಟನೆಯ ತರಬೇತಿ ಪಡೆದಿರುವುದು. ಆರು ವರ್ಷಗಳ ಕಾಲ ಕಥಕ್ ನೃತ್ಯವನ್ನೂ ಕಲಿತಿದ್ದಾರಂತೆ.

ಹೀಗಿದ್ದ ಸಾಕ್ಷಿ ಬಾಲಿವುಡ್ ಎಂಟ್ರಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೆ ಕೈ ಬೀಸಿ ಕರೆದದ್ದು ಕನ್ನಡ ಚಿತ್ರರಂಗ. ಕಥೆಯೂ ಚೆನ್ನಾಗಿದ್ದ ಕಾರಣ, ಹಿಂದೆ ಮುಂದೆ ನೋಡದೆ ನಿರ್ದೇಶಕ ಕಿರಣ್ ಗೋವಿಗೆ ಸಾಕ್ಷಿ ಗ್ರೀನ್ ಸಿಗ್ನಲ್ ಕೊಟ್ಟರಂತೆ.

ಈ ಚಿತ್ರ ಖಂಡಿತಾ 'ದೇವದಾಸ್' ಚಿತ್ರದ ಆವೃತ್ತಿಯಲ್ಲ ಅಂತಾರೆ ನಿರ್ದೇಶಕರು. ಐತಿಹಾಸಿಕ ಪ್ರೇಮದ ಹೆಸರಿನಲ್ಲಿ ಸುತ್ತುವ ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿ. ನಾಯಕಿಗೆ ಸಾಂಪ್ರದಾಯಿಕ ಮತ್ತು ಆಧುನಿಕ ಲುಕ್ ಬೇಕಾಗಿತ್ತು. ಸಾಕ್ಷಿಯ ಫೋಟೋ ನೋಡಿದಾಗ, ಈಕೆಯೇ ಸೂಕ್ತ ಎಂಬುದನ್ನು ಗಟ್ಟಿ ಮಾಡಿಕೊಂಡೆ. ಎಲ್ಲವೂ ಪಕ್ಕಾ ಆಗಿದೆ. ಇನ್ನು ಚಿತ್ರೀಕರಣವಷ್ಟೇ ಬಾಕಿ ಎನ್ನುತ್ತಾರವರು.

'ಪಾರು ವೈಫ್ ಆಫ್ ದೇವದಾಸ್'ಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಸೆಲ್ವಂ ಕ್ಯಾಮರಾ, ಆನಂದಪ್ರಿಯ ಸಂಭಾಷಣೆಯಿದೆ. ಪ್ರಿಯಾಂಕಾ ಚಂದ್ರ ಕೂಡ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಬೆಂಗಳೂರು ಮತ್ತು ಜೈಪುರಗಳಲ್ಲಿ ಚಿತ್ರೀಕರಣ.

Share this Story:

Follow Webdunia kannada