Select Your Language

Notifications

webdunia
webdunia
webdunia
webdunia

ಪಾರು ವೈಫ್ ಆಫ್ ದೇವದಾಸ್‌: ಕಿಟ್ಟಿಗೆ ಸೌಂದರ್ಯ ನಾಯಕಿ

ಪಾರು ವೈಫ್ ಆಫ್ ದೇವದಾಸ್‌: ಕಿಟ್ಟಿಗೆ ಸೌಂದರ್ಯ ನಾಯಕಿ
PR
ವರ್ಷದ ಹಿಂದಿನ ಮಾತು. 'ಪಾರು ವೈಫ್ ಆಫ್ ದೇವದಾಸ್' ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ದೆಹಲಿ ಹುಡುಗಿ ಸಾಕ್ಷಿ ನಾಯಕಿ ಎಂದು ನಿರ್ದೇಶಕ ಕಿರಣ್ ಗೋವಿ ಘೋಷಿಸಿದ್ದರು. ಅಷ್ಟರಲ್ಲಿ ನಿರ್ಮಾಪಕ ಶಿವಾನಂದ ಮಾದಶೆಟ್ಟಿ ಕೈ ಎತ್ತಿ ಬಿಟ್ಟರು. ಪ್ರಾಜೆಕ್ಟ್ ಬಹುತೇಕ ಬಿದ್ದು ಹೋಯಿತು. ಈಗ ಮತ್ತೆ ನಿರ್ಮಾಪಕರು ಸಿಕ್ಕಿದ್ದಾರೆ. ಹೊಸ ನಾಯಕಿಯ ಆಯ್ಕೆಯಾಗಿದೆ. ಅದು ಬೇರೆ ಯಾರೂ ಅಲ್ಲ, ಸೌಂದರ್ಯ ಜಯಮಾಲಾ!

'ಗಾಡ್‌ಫಾದರ್' ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಜೂನಿಯರ್ ಜಯಮಾಲಾರಿಗೆ ಅಷ್ಟೇನೂ ದೊಡ್ಡ ಸ್ವಾಗತ ಸಿಗಲಿಲ್ಲ. ಹಾಗಾಗಿ ಸೀನಿಯರ್ ಜಯಮಾಲಾರಿಗೆ ನಿರಾಸೆಯಾಗಿತ್ತು. ಮೈ ಕೊಡವಿ ನಿಂತವರು ಬಂದ ಪಾತ್ರಗಳನ್ನು ಭೂತಗನ್ನಡಿಯಿಂದ ನೋಡತೊಡಗಿದರು. ಹತ್ತಾರು ಅವಕಾಶಗಳನ್ನು ಕೈ ಚೆಲ್ಲಿದರು. ಹಾಗೆ ಕಥೆ ನೋಡುತ್ತಾ ಕೂತವರಿಗೆ 'ಪಾರು ವೈಫ್ ಆಫ್ ದೇವದಾಸ್' ಇಷ್ಟವಾಗಿದೆ. ಮಗಳ ಪಾತ್ರ ಚೆನ್ನಾಗಿದೆ ಅನ್ನೋದು ಖಚಿತವಾಗಿದೆ.

ಅಂದ ಹಾಗೆ, ಈಗ ಕಿರಣ್ ಗೋವಿ ನಿರ್ದೇಶನದ ಈ ಚಿತ್ರವನ್ನು ನಿರ್ಮಿಸಲು ಹೊರಟಿರುವವರು ಕೃಷ್ಣ ದೇವೇ ಗೌಡ ಮತ್ತು ಮುಖ್ತಾರ್ ಎಂಬವರು. ಉತ್ತಮ ಕಥೆ ಸಿಕ್ಕಿದರೆ ಸಿನಿಮಾ ಮಾಡಬೇಕು ಎಂದು ಕುಂತವರಿಗೆ ಕಿರಣ್ ಗೋವಿ ಮರುಳು ಮಾಡಿದ್ದರು. ಅದರಲ್ಲೂ ಕೃಷ್ಣ ದೇವೇ ಗೌಡರಿಗೆ ಕಿಟ್ಟ ಜತೆ ಸಿನಿಮಾ ಮಾಡಬೇಕೆಂಬ ಆಸೆಯಿತ್ತು. ಅದು 'ಪಾರು ವೈಫ್ ಆಫ್ ದೇವದಾಸ್' ಮೂಲಕ ಈಡೇರುತ್ತಿದೆ.

'ಪಾರು ವೈಫ್ ಆಫ್ ದೇವದಾಸ್' ಎಂದು ಹೆಸರಿದ್ದ ಕೂಡಲೇ ಈಗಾಗಲೇ ಸಾಕಷ್ಟು ಭಾಷೆಗಳಲ್ಲಿ ಬಂದಿರುವಂತೆ ದೇವದಾಸನದ್ದು ಬಾಟ್ಲಿ ಪ್ರೇಮಿ ಪಾತ್ರವಲ್ಲ. ಇಬ್ಬರೂ ಡ್ಯಾನ್ಸರುಗಳು. ದೇವದಾಸನಿಗೆ ಪಾಶ್ಚಾತ್ಯ ಸಂಗೀತ ಇಷ್ಟವಾದರೆ, ಪಾರ್ವತಿಗೆ ಕಥಕ್ ನೃತ್ಯ ಇಷ್ಟ. ಅದೇ ಸಾಲಿನಲ್ಲಿ ಕಥೆ ಸಾಗುತ್ತದೆಯಂತೆ.

ಚಿತ್ರದ ಕಥೆ ಕೇಳಿದ ನಂತರ ಇದು 'ಸಂಜು ವೆಡ್ಸ್ ಗೀತಾ' ಚಿತ್ರದ ಮಟ್ಟಕ್ಕಿದೆ ಎಂಬ ಭಾವನೆ ಬಂದಿದೆ. ಹಾಗಾಗಿ ಒಪ್ಪಿಕೊಂಡಿದ್ದೇನೆ. ಶೀಘ್ರ ಚಿತ್ರೀಕರಣ ಆರಂಭವಾಗಲಿದೆ ಎಂದು ನಾಯಕ ಕಿಟ್ಟಿ ಪ್ರತಿಕ್ರಿಯಿಸಿದ್ದರೆ, ನಾನೇನು ಅನ್ನೋದನ್ನು ಈ ಚಿತ್ರದ ಮೂಲಕ ತೋರಿಸುತ್ತೇನೆ ಎಂದು ನಾಯಕಿ ಸೌಂದರ್ಯ ತಿಳಿಸಿದ್ದಾರೆ.

ವಿ. ನಾಗೇಂದ್ರ ಪ್ರಸಾದ್ ಐದು ಹಾಡುಗಳಿಗೆ ಹಾಗೂ ಜಯಂತ್ ಕಾಯ್ಕಿಣಿ ಒಂದು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ತುಂಬಾ ಒಳ್ಳೆಯ ಟ್ಯೂನ್‌ಗಳನ್ನು ಹಾಕಿದ್ದಾರಂತೆ.

ಪಯಣ, ಸಂಚಾರಿ ಚಿತ್ರಗಳಿಂದ ಹೆಸರು ಪಡೆದಿರುವ ಕಿರಣ್ ಗೋವಿ ಎರಡು ವರ್ಷ ಕಷ್ಟಪಟ್ಟು 'ಪಾರು ವೈಫ್ ಆಫ್ ದೇವದಾಸ್' ಚಿತ್ರದ ಕಥೆ ಬರೆದಿದ್ದಾರೆ. ಎಡರು ತೊಡರುಗಳನ್ನು ದಾಟಿ ಚಿತ್ರ ಮುಹೂರ್ತವನ್ನೂ ಮುಗಿಸಿಕೊಂಡಿದೆ. ಇನ್ನೇನಿದ್ದರೂ ಚಿತ್ರೀಕರಣ. ಇಬ್ಬರು ವಿತರಕರು ನಾಲ್ಕು ಕೋಟಿ ರೂ. ಸುರಿಯುತ್ತಿದ್ದಾರೆ. ಒಳ್ಳೆಯ ಚಿತ್ರ ಕೊಡುವ ಭರವಸೆಯಲ್ಲಿದ್ದಾರೆ ನಿರ್ದೇಶಕರು.

Share this Story:

Follow Webdunia kannada