Select Your Language

Notifications

webdunia
webdunia
webdunia
webdunia

'ಪರಮಾತ್ಮ' ಫೇಲಾಗಿದ್ರಿಂದ್ಲೇ 'ಡ್ರಾಮಾ' ಲೇಟಾಯ್ತು!

'ಪರಮಾತ್ಮ' ಫೇಲಾಗಿದ್ರಿಂದ್ಲೇ 'ಡ್ರಾಮಾ' ಲೇಟಾಯ್ತು!
, ಮಂಗಳವಾರ, 28 ಫೆಬ್ರವರಿ 2012 (11:03 IST)
SUJENDRA
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಂತಹ ಗ್ಯಾರಂಟಿ ನಾಯಕನಿದ್ದರೂ ಯೋಗರಾಜ ಭಟ್ 'ಪರಮಾತ್ಮ'ದಲ್ಲಿ ಎಡವಿದ್ದರು. ಹಾಗೆ ಎಡವಿದ್ದೆಲ್ಲಿ ಎಂಬುದನ್ನು ಪತ್ತೆ ಮಾಡಿ, ರಿಪೇರಿ ಮಾಡುವಷ್ಟರಲ್ಲಿ 'ಡ್ರಾಮಾ' ಲೇಟಾಯ್ತು. ಆದ್ರೂ ಇನ್ನೇನು ಮಾರ್ಚ್ 2ರಿಂದ ಚಿತ್ರೀಕರಣ ಶುರು ಅನ್ನೋದು ಪಕ್ಕಾ ಆಗಿದೆ.

ಭಟ್ರ ನಿರ್ದೇಶನದ ಎಂಟನೇ ಚಿತ್ರ 'ಡ್ರಾಮಾ'. ಮಣಿ, ರಂಗ ಎಸ್ಸೆಸ್ಸೆಲ್ಸಿ ಚಿತ್ರಗಳ ನಂತರ ಭಟ್ರು ಯಾವತ್ತೂ ನಿರಾಸೆ ಅನುಭವಿಸಿದ್ದೇ ಇಲ್ಲ. ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿಗಳು ಕಾಸಿನ ಜತೆ ನಿರ್ದೇಶಕರಿಗೆ ಉತ್ತಮ ಹೆಸರನ್ನೂ ತಂದು ಕೊಟ್ಟಿದ್ದವು. ಆದರೆ ನಿರಾಸೆಯ ಸಾಲಿಗೆ 'ಪರಮಾತ್ಮ' ಸೇರಿತ್ತು. ನಿರ್ಮಾಪಕರ ಜೇಬು ತುಂಬಿಸಿದರೂ, ಚಿತ್ರಕ್ಕೆ ಪ್ರೇಕ್ಷಕರಿಂದ ಭಟ್ರ ಹಿಂದಿನ ಚಿತ್ರಗಳಿಗೆ ಸಿಕ್ಕಿದ ರೀತಿಯ ಅಭೂತಪೂರ್ವ ಬೆಂಬಲ ಸಿಗಲೇ ಇಲ್ಲ.

ಫಿಲಾಸಫಿ ಜಾಸ್ತಿಯಾಯ್ತು, ಮನರಂಜನೆ ಕಡಿಮೆಯಾಯ್ತು. ಕಮರ್ಷಿಯಲ್ ಅಂಶಗಳನ್ನು ಕಡೆಗಣಿಸಲಾಗಿದೆ ಮುಂತಾದ ಅರಗಿಸಿಕೊಳ್ಳಲಾಗದ ಆರೋಪಗಳನ್ನು ಕೊನೆಗೂ ಅರ್ಥ ಮಾಡಿಕೊಂಡ ಭಟ್ಟರು, 'ಡ್ರಾಮಾ'ದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾದ್ರು. ಚಿತ್ರಕಥೆ ಮೊದಲೇ ರೆಡಿಯಾಗಿದ್ರೂ, ಇದೇ ಕಾರಣದಿಂದ ಶೂಟಿಂಗ್ ಶುರುವಾಗೋದು ಲೇಟಾಯ್ತು ಎಂದು ಹೇಳುತ್ತಿವೆ ಗಾಂಧಿನಗರದ ಮೂಲಗಳು.

ಈಗ ಎಲ್ಲವನ್ನೂ ಒಂದು ಹಂತಕ್ಕೆ ತಂದು ನಿಲ್ಲಿಸಿರುವ ಭಟ್ರು, ಚಿತ್ರೀಕರಣಕ್ಕೆ ರೆಡಿಯಾಗಿದ್ದಾರೆ. ಮಾರ್ಚ್ 2ರ ಶುಕ್ರವಾರದಂದೇ ಚಿತ್ರಕ್ಕೆ ಮುಹೂರ್ತ. ಅತ್ತ ರೆಬೆಲ್ ಸ್ಟಾರ್ ಅಂಬರೀಷ್ ಮನೆಯಲ್ಲಿ 'ಚೌಡಯ್ಯ' ಶುರುವಾಗುತ್ತಿದ್ದಂತೆ, ಇತ್ತ ಮೈಸೂರಿನಲ್ಲಿ ಭಟ್ರು 'ಡ್ರಾಮಾ' ಪರದೆ ಮೇಲೆಳೆಯಲಿದ್ದಾರೆ.

ಅಂದ ಹಾಗೆ ಯಶ್, ರಾಧಿಕಾ ಪಂಡಿತ್, ಪ್ರಜ್ಞಾ, ನಿನಾಸಂ ಸತೀಶ್ ಟೀಮಿಗೆ ಪ್ರಕಾಶ್ ರೈ ಸೇರ್ಪಡೆಯಾಗಿರೋದು ನಿಮಗೆ ಗೊತ್ತೇ ಇದೆ. ರೈ ಶೀಘ್ರದಲ್ಲೇ ಡ್ರಾಮಾ ತಂಡವನ್ನು ಸೇರ್ತಾರಂತೆ. ನಂತ್ರ ಏನಿದ್ರೂ ಭಟ್ರ ಮೇನಿಯಾ.

Share this Story:

Follow Webdunia kannada