Select Your Language

Notifications

webdunia
webdunia
webdunia
webdunia

ನೀರ್ ದೋಸೆ: ರಮ್ಯಾರನ್ನು ಓಡಿಸಿದ ಹೆಜ್ಜೇನುಗಳು, ಭಾವನಾ ಔಟ್!

ನೀರ್ ದೋಸೆ: ರಮ್ಯಾರನ್ನು ಓಡಿಸಿದ ಹೆಜ್ಜೇನುಗಳು, ಭಾವನಾ ಔಟ್!
PR
'ನೀರ್ ದೋಸೆ' ಚಿತ್ರತಂಡವನ್ನು ಸೋಮವಾರ ಬೆಳಗ್ಗೆ ಜೇನ್ನೊಣಗಳು ಅಟ್ಟಾಡಿಸಿಕೊಂಡು ಕಚ್ಚಿವೆ. ಆದರೆ ಅಪಾಯದಿಂದ ನಾಯಕಿ ಲಕ್ಕಿ ಸ್ಟಾರ್ ರಮ್ಯಾ ಪಾರಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

ರಾಜರಾಜೇಶ್ವರಿನಗರದ ಬೆಸ್ಟ್ ಕ್ಲಬ್‌ನಲ್ಲಿ ಸೋಮವಾರ ಚಿತ್ರೀಕರಣ ನಡೆಯುತ್ತಿತ್ತು. ರಮ್ಯಾ ಮತ್ತು ದತ್ತಣ್ಣ ಸೆಟ್‌ನಲ್ಲಿರುವ ಸಂದರ್ಭ ಇದ್ದಕ್ಕಿದ್ದಂತೆ ಜೇನ್ನೊಣಗಳು ದಾಳಿ ಮಾಡಿದ್ದವು. ಅಪಾಯ ಅರಿತು ಎಚ್ಚೆತ್ತುಕೊಂಡ ರಮ್ಯಾ ತಕ್ಷಣವೇ ಶೂಟಿಂಗ್ ವಾಹನದೊಳಕ್ಕೆ ಹೋಗಿ ತಪ್ಪಿಸಿಕೊಂಡರು. ಆದರೆ ರಮ್ಯಾ ಸಹಾಯಕರು ಸೇರಿದಂತೆ ಸೆಟ್‌ನಲ್ಲಿದ್ದ ಇತರರಿಗೆ ಜೇನ್ನೊಣಗಳು ಕಚ್ಚಿದವು.

ಈ ಸಂದರ್ಭ ಕೆಲವರು ಈಜುಕೊಳಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಚಿತ್ರೀಕರಣ ಜಾಗ ಬದಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು 'ನೀರ್ ದೋಸೆ' ಚಿತ್ರದಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವನಾ ಹೊರ ನಡೆದಿದ್ದಾರೆ. ಚಿತ್ರದಲ್ಲಿ ನಟಿಸುತ್ತಿಲ್ಲ ಎಂದುಹೇಳಿಕೊಂಡಿದ್ದಾರೆ! ಭಾವನಾ ಇಲ್ಲಿ ಕಿರಿಕ್ ಮಾಡಿ ಹೊರ ಹೋಗುತ್ತಿಲ್ಲ. ಒಪ್ಪಿಕೊಂಡಿರುವ ಭರತನಾಟ್ಯ ಪ್ರದರ್ಶನಗಳ ಕಾರಣ ಚಿತ್ರೀಕರಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 'ನೀರ್ ದೋಸೆ' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಸಿದ್ಲಿಂಗು' ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ 'ನೀರ್ ದೋಸೆ'ಯಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಭಾವನಾ ಮತ್ತು ದತ್ತಣ್ಣ ಇನ್ನೆರಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಈಗ ಭಾವನಾ ಕಳಚಿಕೊಂಡಿದ್ದಾರೆ.

ಭಾವನಾ ತನ್ನ ಭರತನಾಟ್ಯದ ಕಾರಣ ನೀಡಿದ್ದರೂ, ಬೇರೆ ಏನಾದರೂ ಕಿರಿಕ್ ಆಗಿರುವ ಬಗ್ಗೆಯೂ ಶಂಕೆಗಳಿವೆ. ರಮ್ಯಾ ಮತ್ತು ಭಾವನಾ ಇಬ್ಬರ ನಡುವಿನ ಸಂಬಂಧವೂ ಇಲ್ಲಿ ಪಾತ್ರವಹಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕರು ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಭಾವನಾ ಜಾಗಕ್ಕೆ ಬೇರೆ ನಟಿಯನ್ನು ಆಯ್ಕೆ ಮಾಡಲು ಹೊರಟಿದ್ದಾರೆ.

'ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್ ಅವರದ್ದು ಶವ ಸಾಗಾಟದ ವ್ಯಾನ್ ಚಾಲಕನ ಪಾತ್ರ. ರಮ್ಯಾ ಕ್ಲಬ್ ಡ್ಯಾನ್ಸರ್ ಆಗಿ ಹಾಗೂ ದತ್ತಣ್ಣ ಲೋಕೋಪಯೋಗಿ ಇಲಾಖೆಯ ನಿವೃತ್ತ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Share this Story:

Follow Webdunia kannada