Select Your Language

Notifications

webdunia
webdunia
webdunia
webdunia

ನಿರ್ಮಾಪಕರಿಗೆ ಮೊದಲಾ ಸಲ ಯಶ್ ಧಮ್ಕಿ

ನಿರ್ಮಾಪಕರಿಗೆ ಮೊದಲಾ ಸಲ ಯಶ್ ಧಮ್ಕಿ
PR
ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ 'ಮೊದಲಾ ಸಲ' ಚಿತ್ರ ಹಳ್ಳ ಹಿಡಿದಿದ್ದ ಕನ್ನಡ ಚಿತ್ರರಂಗಕ್ಕೆ ಒಂದಷ್ಟು ಭರವಸೆ ಹುಟ್ಟಿಸಿತ್ತು. ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಸದಭಿರುಚಿಯ ಚಿತ್ರವಾದ್ದರಿಂದ 'ಮೊದಲಾ ಸಲ' ಐವತ್ತು ದಿನಗಳನ್ನು ಪೂರೈಸಿ ಮುನ್ನಡೆದಿದೆ.

ಪರಿಣಾಮವಾಗಿ ಚಿತ್ರದ ನಾಯಕ ನಟ ಯಶ್‌ಗೆ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಅವಕಾಶಗಳೂ ಸಿಗತೊಡಗಿದವು. ಆದರೆ ಅಷ್ಟರಲ್ಲೇ ಯಶ್ ತಾನೊಬ್ಬ ಮಹಾನ್ ಸ್ಟಾರ್ ಆಗಿಬಿಟ್ಟಿದ್ದೇನೆಂಬ ಅಹಂ ಏರಿಸಿಕೊಂಡು 'ಮೊದಲಾ ಸಲ' ಚಿತ್ರದ ನಿರ್ಮಾಪಕ ಯೋಗೀಶ್ ನಾರಾಯಣ್‌ಗೆ ಧಮ್ಕಿ ಹಾಕಿರುವುದು ಗಾಂಧಿನಗರದ ಲೇಟೆಸ್ಟ್ ಸುದ್ದಿ.

'ಮೊದಲಾ ಸಲ'ಕ್ಕೆ ಮೊದಲು 'ರಾಕಿ', 'ಮೊಗ್ಗಿನ ಮನಸ್ಸು', 'ಕಳ್ಳರ ಸಂತೆ', 'ಗೋಕುಲ' ಚಿತ್ರಗಳಲ್ಲಿ ಯಶ್ ಅಭಿನಯಿಸಿದ್ದರಾದರೂ ಯಶ್ ಹೆಸರು ತಂದದ್ದು ಮಾತ್ರ 'ಮೊದಲಾ ಸಲ' ಚಿತ್ರ. ಮೇಲಾಗಿ 'ಮೊದಲಾ ಸಲ'ದಿಂದ ಯಶ್‌ಗೆ ಬರೋಬ್ಬರಿ ಹದಿನೆಂಟು ಲಕ್ಷ ರೂಪಾಯಿ ಸಂಭಾವನೆಯೂ ದೊರಕಿತ್ತು.

ಚಿತ್ರೀಕರಣ ಪೂರ್ತಿಗೊಂಡ ನಂತರ ಚಿತ್ರದ ನಿರ್ಮಾಪಕರಾದ ಯೋಗೀಶ್ ನಾರಾಯಣ್ ಮತ್ತು ಮಲ್ಲಿಕಾರ್ಜುನ್ ಗದಗ್ ನಡುವೆ ವಿವಾದ ಹುಟ್ಟಿಕೊಂಡದ್ದೇ ಇಷ್ಟಕ್ಕೆಲ್ಲ ಮೂಲ ಕಾರಣ.

ನಾಯಕ ನಟ ಯಶ್ ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಗದಗ್ ಮತ್ತು ನಿರ್ದೇಶಕ ಪುರುಷೋತ್ತಮ್ ಪರ ನಿಂತು ಮಾತನಾಡಿದ್ದರು.

ಇದರಿಂದ ಚಿತ್ರದ ಪ್ರೊಮೋಶನ್‌ಗೆ ಯೋಗೀಶ್‌ರನ್ನೇ ಕೈಬಿಟ್ಟದ್ದು ಯೋಗೀಶ್‌ರನ್ನು ಬೇಸರಗೊಳಿಸಿತ್ತು. ಇದನ್ನು ತಿಳಿದ ಕೆಲ ಪತ್ರಿಕೆಗಳು ಯೋಗೀಶ್‌ಗೆ ಆದ ಅನ್ಯಾದ ಬಗ್ಗೆ ಬರೆದು ಯಶ್‌ರನ್ನು ತರಾಟೆಗೆ ತೆಗೆದುಕೊಂಡದ್ದು ಯಶ್ ಪಿತ್ಥ ನೆತ್ತಿಗೇರಿಸಿದೆ.

ಯಶ್ ಯೋಗಿಗೆ ಮೊಬೈಲ್ ಫೋನ್‌ನಲ್ಲಿ ಯದ್ವಾತದ್ವಾ ಬೈದುದಲ್ಲದೆ ಫೈಟರ್‌ಗಳನ್ನು ಕಟ್ಟಿಕೊಂಡು ಮನೆಯ ಬಳಿ ಬರುವುದಾಗಿ ಧಮ್ಕಿ ಬೇರೆ ಹಾಕಿದ್ದಾರಂತೆ.

ಆಗ ಮೊಬೈಲ್ ಕಿತ್ತುಕೊಂಡ ಯಶ್ ಅವರ ತಾಯಿಯೂ ಯೋಗೀಶ್ ವಿರುದ್ಧ ವಾಚಾಮಗೋಚರವಾಗಿ ಸಂಸ್ಕ್ಕತ ಪ್ರಯೋಗಿಸಿದ್ದಾರೆ. ಇದರಿಂದ ಕಂಗಾಲಾಗಿರುವ ಯೋಗೀಶ್ 'ನನಗಿದು ಮೊದಲಾ ಸಲದ ಹೀನಾಯ ಅನುಭವ' ಎಂದು ಗೋಳಿಡುತ್ತಿದ್ದಾರೆ.

ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಯಶ್ ನಿರ್ಮಾಪಕರಿಬ್ಬರ ಜಗಳದಲ್ಲಿ ವೃಥಾ ತಲೆ ಹಾಕಿ ಹೆಸರು ಕೆಡಿಸಿಕೊಳ್ಳುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸುತ್ತಿದೆ ಗಾಂಧಿನಗರ.

Share this Story:

Follow Webdunia kannada