ಬಾಲಿವುಡ್ 'ಗಾಂಧಿಗಿರಿ'ಯ ವಾರಸುದಾರ ಸಂಜಯ್ ದತ್ ಕನ್ನಡಕ್ಕೂ ಬರುತ್ತಾರಾ? ಅದೂ ದುನಿಯಾ ವಿಜಯ್ ಎದುರು ಖಳನಟನಾಗಿ? ಇನ್ನೂ ಸ್ಪಷ್ಟವಿಲ್ಲ. ಆದರೆ ಇಂತಹದ್ದೊಂದು ಪ್ರಯತ್ನ ನಡೆಯುತ್ತಿರುವುದು ನಿಜ. ಕಳೆದೊಂದು ತಿಂಗಳಿನಿಂದ ಸಂಜಯ್ ದತ್ ಮ್ಯಾನೇಜರ್ ಜತೆ ಸ್ಯಾಂಡಲ್ವುಡ್ ನಿರ್ಮಾಪಕರು ಮಾತನಾಡುತ್ತಿದ್ದಾರೆ. ಆ ಕಡೆಯಿಂದ ಮಾತ್ರ ಇನ್ನೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಜಾಕಿಶ್ರಾಫ್ 'ಅಣ್ಣಾ ಬಾಂಡ್'ನಲ್ಲಿ ಮಾಡಿದಂತಹ ಪಾತ್ರವೇ 'ಚಕ್ರವರ್ತಿ' ಚಿತ್ರದಲ್ಲಿ ಸಂಜಯ್ ದತ್ಗಾಗಿ ಕಾಯುತ್ತಿದೆ. ಆ ಪಾತ್ರಕ್ಕೆ ಅವರೇ ಬೇಕೆಂದು ಪಟ್ಟು ಹಿಡಿಯಲು ಕಾರಣ, ನಿರ್ಮಾಪಕ ಪ್ರಸಾದ್. 'ಅಗ್ನಿಪಥ್' ಚಿತ್ರದಲ್ಲಿನ ದತ್ ಅಭಿನಯ ನೋಡಿ ಪ್ರಸಾದ್ ಕಂಗಾಲಾಗಿದ್ದಾರೆ. ಬೇಕೇ ಬೇಕು ಎಂದು ಕಾಯುತ್ತಿದ್ದಾರೆ.
ಚಿಂತನ್ ನಿರ್ದೇಶನದ 'ಚಕ್ರವರ್ತಿ'ಯಲ್ಲಿ ದುನಿಯಾ ವಿಜಯ್ ನಾಯಕ. ನಾಯಕಿ ಯಾರು ಅನ್ನೋದು ಖಚಿತವಾಗಿಲ್ಲ. ಆದರೆ ಪ್ರಿಯಾಮಣಿಯೇ ಆಯ್ಕೆಯಾಗುವ ಸಾಧ್ಯತೆಗಳು ಜಾಸ್ತಿ.
ದುಬೈಯಲ್ಲೇ ಶೂಟಿಂಗ್... ಸಂಜಯ್ ದತ್ ಒಂದು ವೇಳೆ ಒಪ್ಪಿಕೊಂಡರೆ, ಅವರ ಭಾಗದ ಪೂರ್ತಿ ಚಿತ್ರೀಕರಣವನ್ನು ದುಬೈಯಲ್ಲೇ ನಡೆಸಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಚಿಂತನ್. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಸಾರಥಿ'ಯಲ್ಲಿ ಸಂಭಾಷಣೆಕಾರನಾಗಿ ಹೆಸರು ಮಾಡಿದ್ದ ಚಿಂತನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ನಾವು ಸಂಜಯ್ ದತ್ ಅವರ ಮ್ಯಾನೇಜರ್ ಜತೆ ಮಾತನಾಡಿದ್ದೇವೆ. ದತ್ ಈಗ ಮಲೇಷಿಯಾದಲ್ಲಿದ್ದಾರೆ. ಅವರು ಭಾರತಕ್ಕೆ ಬರುತ್ತಿದ್ದಂತೆ ಎಲ್ಲವೂ ಗೊತ್ತಾಗುತ್ತದೆ. ನಾವಂತೂ ಒಂದೊಳ್ಳೆ ಕನ್ನಡ ಸಿನಿಮಾ ಹೊರ ತರುವ ಉದ್ದೇಶದಿಂದ, ಸಂಜಯ್ ದತ್ರನ್ನೇ ಆ ಪಾತ್ರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುತ್ತಾರೆ ಚಿಂತನ್.
ಅವರು ಆಗೋದಿಲ್ಲ ಎಂಬ ಉತ್ತರವೇನಾದರೂ ಕೊಟ್ಟರೆ? ಆಗ ಬೇರೆ ಯಾರನ್ನಾದರೂ ಸಂಪರ್ಕಿಸುವ ಯೋಚನೆ ಮಾಡುತ್ತೇವೆ. ಸದ್ಯ ಸಂಜಯ್ ದತ್ ಬಿಟ್ಟರೆ ನಮ್ಮ ಮನಸ್ಸಿನಲ್ಲಿರುವುದು ಕಮಲ್ ಹಾಸನ್. ನೋಡೋಣ ಎಂದು ನಿರ್ದೇಶಕರು ಮಾತು ಮುಗಿಸಿದರು.
' ಚಕ್ರವರ್ತಿ' ಚಿತ್ರದ ಮುಹೂರ್ತ ಇನ್ನೇನು ಆರಂಭವಾಗಲಿದೆ. ಆದರೆ ಚಿತ್ರೀಕರಣ ಆಗಸ್ಟ್ ನಂತರವಷ್ಟೇ ಶುರು.
ಸಂಜಯ್ ದತ್ ಈ ಚಿತ್ರದಲ್ಲಿ ಖಳನಾಗೋ ಸಾಧ್ಯತೆಗಳಿವೆ ಎಂಬ ಸುದ್ದಿಯೇ ನಾಯಕ ವಿಜಯ್ ರೋಮಾಂಚನಗೊಳ್ಳುವಂತೆ ಮಾಡಿದೆ. ಅವರಂತೂ ಸದ್ಯ ತನ್ನ ಆಕ್ಷನ್ ಪಾತ್ರಕ್ಕಾಗಿ ಪ್ರತಿದಿನ ಮೈದಂಡಿಸುತ್ತಿದ್ದಾರೆ. ಪಾತ್ರಕ್ಕೆ ಬೇಕಾದಂತೆ ದೇಹವನ್ನು ಹುರಿಗೊಳಿಸುತ್ತಿದ್ದಾರಂತೆ.