Select Your Language

Notifications

webdunia
webdunia
webdunia
webdunia

'ಡ್ರಾಮಾ' ಟೀಮಿನಿಂದ ಪ್ರಜ್ಞಾ ಔಟ್; ಏನಿದು ಭಟ್ರೇ?

'ಡ್ರಾಮಾ' ಟೀಮಿನಿಂದ ಪ್ರಜ್ಞಾ ಔಟ್; ಏನಿದು ಭಟ್ರೇ?
SUJENDRA
ಇಡೀ ಕರ್ನಾಟಕಕ್ಕೆ ಮಳೆ ತರಿಸಿದ ಯೋಗರಾಜ್ ಭಟ್ ಈಗ ಬರೀ ಗುಡುಗು-ಸಿಡಿಲುಗಳನ್ನು ಕಟ್ಟಿ ಕೊಡುತ್ತಿರುವಂತಿದೆ. ಕಾರಣ, ಅವರ 'ಡ್ರಾಮಾ' ಟೀಮ್‌ನಲ್ಲಾಗುತ್ತಿರುವ ಬದಲಾವಣೆ, ಗೊಂದಲಗಳು. ಅವರ ಚಿತ್ರವೀಗ ಇಂತಹ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ. ಇದಕ್ಕೆ ಇತ್ತೀಚಿನ ಸೇರ್ಪಡೆ ನಾಯಕಿ ಪ್ರಜ್ಞಾ 'ಡ್ರಾಮಾ' ಟೀಮಿನಿಂದ ಹೊರಗೆ ನಡೆದಿರುವುದು!

ಯಾಕೆ, ಪ್ರಜ್ಞಾ ಏನೋ ಗಲಾಟೆ ಮಾಡ್ಕೊಂಡಿರ್ಬೇಕು. ಅದಕ್ಕೇ ಚಿತ್ರದಿಂದ ಭಟ್ರು ಹೊರಗೆ ಹಾಕಿರ್ತಾರೆ ಅಂತ ನೀವಂದುಕೊಂಡಿದ್ರೆ ಅದು ನಿಜವಲ್ಲ. ಡೇಟ್ಸ್ ಸಮಸ್ಯೆಯಂತೆ. ಹಾಗಾಗಿ ಪ್ರಜ್ಞಾ ಹೊರಗೆ ಹೋದರಂತೆ. ಆ ಜಾಗಕ್ಕೀಗ 'ಲೈಫು ಇಷ್ಟೇನೆ' ಖ್ಯಾತಿಯ ಇನ್ನೊಬ್ಬ ಕನ್ನಡದ ಹುಡುಗಿ ಸಿಂಧು ಲೋಕನಾಥ್ ಬಂದಿದ್ದಾರೆ.

ಪ್ರಜ್ಞಾ ಈ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದರು. ಚಿತ್ರದಲ್ಲಿ ಆರಂಭದಿಂದಲೇ ತೊಡಗಿಸಿಕೊಂಡಿದ್ದರು ಕೂಡ. ಆದರೆ ಈಗ ಎದುರಾಗಿರುವ ಸಮಸ್ಯೆ, ಸಾಧು ಕೋಕಿಲಾ ನಿರ್ದೇಶನದ ಚಿತ್ರೀಕರಣ. ಆ ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಸದ್ಯ ಫ್ರೀ ಆಗಿರುವುದರಿಂದ, ಶೂಟಿಂಗ್ ನಡೆಸಲು ಕೋಕಿಲಾ ಮುಂದಾಗಿದ್ದಾರೆ. ಹೋಗಲೇಬೇಕಾಗಿರುವ ಅನಿವಾರ್ಯತೆಯಲ್ಲಿರುವ ಪ್ರಜ್ಞಾ 'ಡ್ರಾಮಾ' ಟೀಮ್‌ಗೆ ಬೈಬೈ ಹೇಳಿದ್ದಾರೆ.

ಅಂದ ಹಾಗೆ, ಈಗ ಪ್ರಜ್ಞಾ ಬಿಟ್ಟು ಹೋಗಿರುವ ಪಾತ್ರ ಮೂಕಿಯದ್ದು. ಅಂದರೆ, ಸಿಂಧು ಲೋಕನಾಥ್ ಡ್ರಾಮಾದಲ್ಲಿ ಮೂಕಿಯ ಪಾತ್ರ ಮಾಡಲಿದ್ದಾರೆ.

ಭಾಮಾ ಕೂಡ ಹೀಗೆಯೇ ಔಟಾಗಿದ್ದರು...
'ಡ್ರಾಮಾ' ಟೀಮಿನಿಂದ ಡೇಟ್ಸ್ ಸಮಸ್ಯೆಯಿಂದ ಹೊರಗೆ ಹೋಗುತ್ತಿರುವ ಎರಡನೇ ನಟಿ ಪ್ರಜ್ಞಾ. ಈ ಹಿಂದೆ ಮಲಯಾಳಂ ಬೆಡಗಿ ಭಾಮಾ ಕೂಡ ಟೀಮ್‌ನಿಂದ ಔಟಾಗಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಜತೆ 'ಶೈಲೂ' ಚಿತ್ರದಲ್ಲಿ ಮಿಂಚಿದ್ದ ಭಾಮಾರನ್ನೇ ಯೋಗರಾಜ್ ಭಟ್ ಮೊದಲು ನಾಯಕಿಯನ್ನಾಗಿ ಆರಿಸಿದ್ದರು. ಆದರೆ ಮಲಯಾಳಂ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಕನ್ನಡದಲ್ಲಿ ನಟಿಸಲಾಗುತ್ತಿಲ್ಲ ಎಂದು ಭಟ್ರಿಗೆ ಭಾಮಾ ಟಾಟಾ ಹೇಳಿದ್ದರು. ನಂತರ ಆ ಜಾಗಕ್ಕೆ ರಾಧಿಕಾ ಪಂಡಿತ್ ಅವರನ್ನು ಕರೆ ತರಲಾಗಿತ್ತು.

ಅದಕ್ಕೂ ಮೊದಲು ಚಿತ್ರದ ಕಥೆಯೇ ಹೆಚ್ಚು ಕಡಿಮೆ ಬದಲಾಗಿತ್ತು. ಇನ್ನೇನು ಮುಹೂರ್ತ ಎಂದೆಲ್ಲ ನಿರ್ಧಾರವಾಗುವ ಹೊತ್ತಿನಲ್ಲಿ ಈ ಬೆಳವಣಿಗೆಗಳು ನಡೆದಿದ್ದವು. ಈ ನಡುವೆ ಭಟ್ರ ಸಂಬಂಧಿಯೋರ್ವರ ಅನಾರೋಗ್ಯದಿಂದಾಗಿ ಚಿತ್ರ ತಡವಾಗಿತ್ತು. ಕೊನೆಗೂ ಮುಹೂರ್ತ ಮುಗಿಸಿದ 'ಡ್ರಾಮಾ' ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ವಿಘ್ನ ಎದುರಿಸಿದೆ.

ಈ ಸರಣಿ ಇಷ್ಟಕ್ಕೇ ಮುಗಿಯಲಿದೆಯೇ ಅಥವಾ ಇನ್ನೂ ಮುಂದುವರಿಯುತ್ತದೆಯೇ ಅನ್ನೋದನ್ನು ಕಾದು ನೋಡಬೇಕು!

Share this Story:

Follow Webdunia kannada