ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆಗಿನ ಸಂಬಂಧದ ಊಹಾಪೋಹಗಳಿಂದ ಹೈರಾಣಾಗಿ ಹೋಗಿದ್ದ ನಿಖಿತಾ ತುಕ್ರಾಲ್ ಮತ್ತೆ ಕನ್ನಡ ಚಿತ್ರರಂಗದತ್ತ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಅವರೀಗ 'ಮಿಲನ' ಖ್ಯಾತಿಯ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ಕನಸುಗಾರ ರವಿಚಂದ್ರನ್ ಅವರಿಗೆ ನಾಯಕಿಯಾಗಲಿದ್ದಾರೆ.
ಕನ್ನಡದಲ್ಲಿ ಒಪ್ಪಿಕೊಂಡಿರುವ ಹಲವು ಚಿತ್ರಗಳನ್ನೇ ನಿಖಿತಾ ಮುಗಿಸಿಲ್ಲ. ದರ್ಶನ್ ಜೈಲು ಪ್ರಹಸನದ ನಂತರ ಮುಂಬೈ ಸೇರಿಕೊಂಡವರು ವಾಪಸ್ ಬೆಂಗಳೂರಿಗೆ ಬಂದಿಲ್ಲ. ಇನ್ನೇನು ಸಂಗೊಳ್ಳಿ ರಾಯಣ್ಣನ ಚಿತ್ರೀಕರಣಕ್ಕೆ ಬರಲಿದ್ದಾರೆ ಎಂಬ ಸುಳಿವುಗಳ ನಡುವೆಯೇ ಈ ಸುದ್ದಿ ಬಂದಿದೆ.
SUJENDRA
ಹಾಗೆ ನೋಡಿದರೆ, ರವಿಚಂದ್ರನ್ ಅವರಿಗೆ ನಿಖಿತಾ ಇದೇ ಮೊದಲ ಬಾರಿ ನಾಯಕಿಯಾಗುತ್ತಿರುವುದಲ್ಲ. ಈ ಹಿಂದೆ ನಾರಿಯ ಸೀರೆ ಕದ್ದ ಚಿತ್ರದಲ್ಲಿ ನಿಖಿತಾ ಜತೆ ಕ್ರೇಜಿ ಸ್ಟಾರ್ ಉರುಳಾಡಿದ್ದರು.
ಇನ್ನಷ್ಟೇ ಹೆಸರಿಡಬೇಕಿರುವ ಈ ಚಿತ್ರದಲ್ಲಿ ದಿಗಂತ್, ರಾಗಿಣಿ, ರಂಗಾಯಣ ರಘು, ಪಾರ್ವತಿ ಮೆನನ್ ಮುಂತಾದವರು ಕೂಡ ಇರಲಿದ್ದಾರೆ. ಕಲಾವಿದರ ಆಯ್ಕೆ ಇನ್ನಷ್ಟೇ ಅಂತಿಮವಾಗಬೇಕಿದೆ.
' ಟ್ರಾಫಿಕ್'ನಲ್ಲಿ ಪ್ರಕಾಶ್... ಇದುವರೆಗೆ ಸ್ವಮೇಕ್ ಚಿತ್ರಗಳನ್ನೇ ಮಾಡಿಕೊಂಡು ಬಂದು ಭರವಸೆ ಮೂಡಿಸಿದ್ದ ಪ್ರಕಾಶ್ ಎಲ್ಲರಂತೆ ಆಗಲು ಹೊರಟಿದ್ದಾರೆ. ಅವರೀಗ ರವಿಚಂದ್ರನ್-ನಿಖಿತಾರನ್ನು ಹಾಕಿಕೊಂಡು ನಿರ್ದೇಶಿಸಲು ಹೊರಟಿರುವ ಚಿತ್ರ ಮಲಯಾಳಂನ 2011ರ ಸೂಪರ್ ಹಿಟ್ 'ಟ್ರಾಫಿಕ್' ರಿಮೇಕ್. 'ಟ್ರಾಫಿಕ್'ನ್ನು ಮಲಯಾಳಂನಲ್ಲಿ ರಾಜೇಶ್ ಪಿಳ್ಳೈ ನಿರ್ದೇಶಿಸಿದ್ದರು.
ಖುಷಿ, ರಿಷಿ, ಶ್ರೀ, ಮಿಲನ, ಗೋಕುಲಗಳಂತಹ ಅಪ್ಪಟ ಸ್ವಮೇಕ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಕಾಶ್ ರಿಮೇಕ್ ಹಿಂದೆ ಬಿದ್ದಿರುವುದಕ್ಕೆ ಸೋಲುಗಳೇ ಕಾರಣ. ಪುನೀತ್ ನಾಯಕರಾಗಿದ್ದ ಮಿಲನ ಬಿಟ್ಟರೆ, ಅವರೆಲ್ಲ ಚಿತ್ರಗಳು ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ್ದವು. ಹಾಗಾಗಿ ಯಾವುದೇ ನಿರ್ಮಾಪಕರು ಪ್ರಕಾಶ್ರನ್ನು ನೆಚ್ಚಿಕೊಂಡಿರಲಿಲ್ಲ.
ಹಾಗಾಗಿ ಅವರೀಗ ಅನಿವಾರ್ಯವಾಗಿ ರಿಮೇಕ್ ಸುತ್ತಲು ಹೊರಟಿದ್ದಾರೆ.